Monday, July 27, 2009

ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ! - ಶ್ರೀ ಮಧುಸೂದನ ಪೆಜತ್ತಾಯ

ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.
ನಾನು ನನ್ನ ಅಜ್ಜ ಡಾ. ರಾಮರಾವ್ ಬಾಗ್ಲೋಡಿ (ರಿಟಾಯರ್ಡ್ ರಾಯಲ್ ಇಂಡಿಯನ್ ಆರ್ಮಿ) ಅವರ ಹಳ್ಳಿಯ ಮನೆಯಲ್ಲಿ ಬೆಳೆದೆ.
ಅವರು ತನ್ನ ಜಮೀನುಗಳಿದ್ದ ಕಿನ್ನಿಕಂಬಳ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಅವರು ಅಲೋಪಥಿ ಡಾಕ್ಟರ್ ಆಗಿದ್ದರೂ ಆಯುರ್ವೇದ ಔಷದದಲ್ಲಿ ಪರಿಣತರಾಗಿದ್ದರು.
ನನ್ನ ಅಜ್ಜಿಯ ಹೆಸರು ಕೃಷ್ಣವೇಣಿಯಮ್ಮ.
ನಾನು ಕೂಡಾ ತಮ್ಮಂತೆಯೇ ದೊಡ್ಡ ಹಟ್ಟಿಯ ಪಕ್ಕ ಇದ್ದ ಮನೆಯಲ್ಲೇ ಬೆಳೆದವನು.
ಮನೆಯಿಂದ ಹಟ್ಟಿಗೆ ಹೋಗುವ ಅಂತರದಲ್ಲೇ ಬಲಬದಿಯಲ್ಲಿ ಇದ್ದದ್ದು ಕರುಗಳ ಕೋಣೆ. ಎಡಬದಿಯಲ್ಲಿ ಇದ್ದುದು ಹಿಂಡಿ ದಾಸ್ತಾನು ಇಡುವ ಕೋಣೆ. ಅದರಲ್ಲಿ ಘಮಘಮಿಸುವ (ಐತುವಿನ ಗಾಣದ) ತೆಂಗಿನ ಹಿಂಡಿ, ಯಂತ್ರದಿಂದ ಹೊರಬರುವಾಗಲೇ ಹಲ್ಲೆಗಳ ರೂಪದಲ್ಲಿ ಬರುತ್ತಿದ್ದ ನೆಲಗಡಲೆ ಮತ್ತು ಎಳ್ಳಿನ ಹಿಂಡಿಯ ಚೀಲಗಳು, ಕೈಯ್ಯಲ್ಲಿ ಭತ್ತ ಕುಟ್ಟುವಾಗ ಮನೆಯಲ್ಲೇ ದೊರಕುತ್ತಿದ್ದ ಭತ್ತದ ತೌಡು, ನುಚ್ಚಕ್ಕಿ ಹಾಕಿಡುತ್ತಾ ಇದ್ದ ಮಣ್ಣಿನ ಬಾನಿಗಳು ಮತ್ತು ದೊಡ್ಡದಾದ ಒಂದು ಕಲ್ಲುಪ್ಪು ಹಾಕಿಡುವ ಮರದ ಪೆಟಾರಿ..... ಇವೆಲ್ಲಾ ಇದ್ದವು.
ಹಿಂಡಿಯ ಕೋಣೆಯ ಪರಿಮಳ ಇಂದಿನ ಕ್ಯಾಟಲ್ ಫೀಡ್ ಹೊರಸೂಸೀತೆ?
ಅದರ ಎದುರಿನದು ಹಸೀ ಹುಲ್ಲು ಹಾಗೂ ದಿನಕ್ಕೆ ಬೇಕಷ್ಟು ಬೈಹುಲ್ಲು ಸಂಗ್ರಹಿಸುವ ಕೋಣೆ.
ಈ ಕೋಣೆಯ ನಂತರ ಇದ್ದುದು ಅಕ್ಕಚ್ಚಿನ ಹಂಡೆಯ ಹಬೆಯಾಡುವ ಕೋಣೆ. ಅದನ್ನು ದಾಟಿ ಹೋದರೆ ನಮಗೆ ಸಿಗುತ್ತಾ ಇದ್ದುದು ದನಗಳ ಗೋದಿಲು ಎಂಬ ಹೆದ್ದಾರಿ! ಇಕ್ಕೆಲದಲ್ಲೂ ಒಂದಕ್ಕೊಂದು ಮುಖ ಹಾಕಿರುವಂತೆ ಕಟ್ಟಿದ ಎಮ್ಮೆ ಮತ್ತು ದನಗಳ ಸಾಲು!
ಪ್ರತೀ ಪಶುವಿಗೂ ಒಂದು ಚೌಕಟ್ಟು. ಅದಕ್ಕೆ ಭದ್ರ್ರವಾಗಿ ಕಟ್ಟಿದ ಬಣ್ಣದ ಕುಚ್ಚಿನ ಗೊಂಡೆ ಹಗ್ಗಗಳು. ಬೈಪಣೆಯಲ್ಲೇ ಪ್ರತೀ ದನಕ್ಕೂ ಒಂದು ಕಲ್ಲಿನ ಮರಿಗೆ - ಅದೇ ದನಗಳ ಊಟದ ಬಟ್ಟಲು ಯಾ ಅಕ್ಕಚ್ಚು ಕುಡಿಯುವ ಬಾನಿ.
ದನಗಳ ತಲೆಯ ಮೇಲೆ ಮಳೆಗಾಲಕ್ಕೆ ಬೆಚ್ಚನೆ ಕಾಪಿಟ್ಟ ಭತ್ತದ ಹುಲ್ಲಿನ ದಾಸ್ತಾನು.
ಬೈಪಣೆಯ ಮಧ್ಯೆ ನಡೆದುಕೊಂಡು ಹೋಗಿ ನಮ್ಮ ಅಜ್ಜಿ ದನಗಳಿಗೆ ದಿನಾ ಬೆಳಗ್ಗೆ ಮತ್ತು ಸಂಜೆ ಅಕ್ಕಚ್ಚಿನಲ್ಲಿ ನೆನೆಸಿಟ್ಟ ಹಿಂಡಿ ತಿನ್ನಿಸಿ, ಕುಡಿಯಲು ಬೇಕಷ್ಟು ಉಗುರು ಬೆಚ್ಚನೆಯ ‘ಅರ್ಕಂಜಿ’ ಹೊಯ್ಯುವರು.
ಹಾಲುಕೊಡುವ ದನಗಳಿಗೆ ಸ್ವಲ್ಪ ಹೆಚ್ಚಿನ ಅರ್ಕಂಜಿ ಹಾಗೂ ಹಿಂಡಿಯ ಉಪಚಾರ ದಿನಾ ಇದ್ದದ್ದೇ!
ನಾನು ದನಗಳ ಹಿಂಭಾಗಕ್ಕೆ ಎಂದಿಗೂ ಹೋದವನಲ್ಲ! ಕಾರಣ ನಮ್ಮದು ಸೊಪ್ಪಿನ ಹಟ್ಟಿ. ಹಟ್ಟಿಯ ನೆಲತುಂಬಾ ಹಸಿ ಸೊಪ್ಪು, ಸೆಗಣಿ ಮತ್ತು ಗಂಜಳ! ಆ ವಾಸನೆ ನನಗೆ ಇಷ್ಟ ಆಗುತ್ತಾ ಇರಲಿಲ್ಲ. ಕಾಲಿಗೆ ಬೇರೆ ದುರ್ವಾಸನೆಯ ಸೆಗಣಿ ಹಿಡಿಯುವ ಭಯ ನನಗೆ ಕೂಡಾ ಇತ್ತು! (ಮುಂದೆ ಇನ್ನೊಮ್ಮೆ ನಾನು ‘ಗೊಬ್ಬರ’ಮಿತ್ರನಾದ ಕತೆ ಹೇಳುತ್ತೇನೆ!)
ದನಗಳಿಗೆ ಈ ಸೊಪ್ಪಿನ ಹಟ್ಟಿಯೇ ಇಷ್ಟ ಅಂತೆ! ಅವು ಮಳೆಗಾಲದಲ್ಲಿ ಬೆಚ್ಚಗೆ ಸೊಪ್ಪಿನ ಮಲೆ ಮಲಗಿರುತ್ತಾ ಇದ್ದುವು. ಹದಿನೈದು ದಿನಗಳಿಗೊಮ್ಮೆ ಗೊಬ್ಬರ ಬಾಚಿದಾಗ ಬೆಚ್ಚನೆಯ ಗೊಬ್ಬರ ದಿಂದ ಹೊಗೆ (ಹಬೆ) ಏಳುತ್ತಿದ್ದದ್ದನ್ನು ನಾನು ಕಂಡಿದ್ದೆ. ಬೇಸಿಗೆಯಲ್ಲಿ ನಮ್ಮ ದನ ಮತ್ತು ಎಮ್ಮೆಗಳು ತಮ್ಮ ‘ಉಚ್ಚೆಯ ಮೇಲೆ ತಂಪಾಗಿ’ ಮಲಗುತ್ತಿದ್ದುವು.
ನಮ್ಮ ದನಗಳನ್ನು ಬೆಳಗ್ಗೆ ಹಾಲು ಕರೆದನಂತರ ಮುದರ ಮತ್ತು ರಾಧು ಮೇಯಲು ನಮ್ಮ ಕುಮರಿಯ ಜಾಗಕ್ಕೆ ಒಯ್ಯುವರು. ಅಲ್ಲಿ ದನ ಮೇಯಿಸಲು ಸಾಧ್ಯವಾಗದಂತೆ ಕುಮರಿಯಲ್ಲೇ ಒಂದು ಕಾಡು ಕಲ್ಲಿನ ಪಾಗಾರ ಹಾಕಿ ಎರಡೆಕರೆ ಜಾಗವನ್ನು ಪ್ರತ್ಯೇಕಿಸಿದ್ದರು. ಅಲ್ಲಿ ನಮ್ಮ ಅಜ್ಜ ಮುಳಿ ಹುಲ್ಲು ಬೆಳೆಸುತ್ತಾ ಇದ್ದರು. ಮುಳಿಹುಲ್ಲು ಹೊಂಬಣ್ಣಕ್ಕೆ ತಿರುಗುವ ಮೊದಲು (ಕತ್ತರಿಸಿದಾಗ ಹಾಲು ತುಂಬಿ ಬರುವಂತೆ ಕಾಣುತ್ತಿದ್ದ ಸಮಯದಲ್ಲಿ) ಪರಿಮಳ ಸೂಸುತ್ತಿದ್ದ ‘ದೋರೆ’ ಬೆಳೆದ ಹುಲ್ಲನ್ನು ಕತ್ತರಿಸಿ ‘ಕರಡ’ ತಯಾರಿಸಿ ಕರಡದ ಬಣವೆ ಮಾಡಿಸುತ್ತಾ ಇದ್ದರು. ಇದು ಅಮೇರಿಕಾದ "ಸೈಲೋ"ಕ್ಕಿಂತ ಕಡಿಮೆ ಇರಲಿಕ್ಕಿಲ್ಲ. ಬೆಳೆದು ಒಣಗಿದ ಮುಳಿಹುಲ್ಲು ಒಕ್ಕಲು ಮನೆಗಳ ಹುಲ್ಲಿನ ಮಾಡಿಗೆ ಪ್ರತೀ ಮಳೆಗಾಲದ ಮೊದಲು ಹೊದಿಸಲು ಅಜ್ಜ ಕೊಡುತ್ತಾ ಇದ್ದರು.
ನನಗೆ ಐದು ವರ್ಷ ಪ್ರಾಯ ತುಂಬುತ್ತಲೇ ಕರುಗಳ ಕೋಣೆಯ ಆಕರ್ಷಣೆ! ಕರುಗಳಿಗೆ ನಮ್ಮ ಗದ್ದೆಯ ಬದು ಬೆಳೆಯುತ್ತಾ ಇದ್ದ ಗರಿಕೆ ತಂದು ತಿನ್ನಿಸುವ ಚಟ! ನಾನು ತಂದ ಮುಷ್ಟಿಯಷ್ಟು ಗರಿಕೆ ಹುಲ್ಲು ಮುಗಿಯುತ್ತಲೇ, ಮೆಲ್ಲಗೆ ಹುಲ್ಲಿನ ಕೋಣೆಗೆ ಹೋಗಿ, ನನ್ನ ಪುಟ್ಟ ಬಾಹುಗಳಿಗೆ ಸಿಕ್ಕಷ್ಟು ಹಸೀ ಹುಲ್ಲು ತಂದು ಕರುಗಳಿಗೆ ನೀಡುತ್ತಾ ಇದ್ದೆ! ಒಣ ಭತ್ತದ ಹುಲ್ಲನ್ನು ನಾನು ಮುಟ್ಟುತ್ತಾ ಇರಲಿಲ್ಲ. ಬೈಹುಲ್ಲನ್ನು ನನ್ನ ಬಾಹುಗಳಿಂದ ಬಾಚಿ ತಂದರೆ ನನ್ನ ಮೈ ಎಲ್ಲಾ ತುರಿಕೆ ಬರುತ್ತಾ ಇತ್ತು.
ನಾನು ದಿನದ ಬಹು ಹೊತ್ತನ್ನು ಕರುಗಳ ಜತೆಗೆ ಆಡುತ್ತಾ ಕಳೆಯುತ್ತಾ ಇದ್ದುದರಿಂದ ನನಗೆ "ಕರುಗಳ ಯಜಮಾನ" ಎಂಬ ಅಡ್ಡ ಹೆಸರು ಬಂದಿತ್ತು!
ಬೆಳಗ್ಗೆ ಮತ್ತು ಸಾಯಂಕಾಲ ನಮ್ಮ ಅಜ್ಜಿ ಹಾಲು ಕರೆಯುತ್ತಾ ಇದ್ದರು. ಮನೆಯ ಉಪಯೋಗಕ್ಕಿಂತ ಹೆಚ್ಚಿಗೆ ಇದ್ದ ಹಾಲನ್ನು ಮಂಗಳೂರಿನ ಮೋಹಿನಿ ವಿಲಾಸಕ್ಕೆ ಅಣ್ಣು ಡ್ರೈವರನ "ಅಣ್ಣು ಬಸ್"ನಲ್ಲಿ ಕಳುಹಿಸುತ್ತಿದ್ದೆವು. ಅಣ್ಣು ಬಸ್ ಎಂದು ನಾವು ಕರೆಯುತ್ತಿದ್ದುದು ಎಸ್.ಡಿ.ಪಿ.ಎಮ್.ಎಸ್ ಅಂದರೆ ಶ್ರೀ ದುರ್ಗಾ ಪರಮೇಶ್ವರೀ ಮೋಟಾರ್ ಸರ್ವಿಸ್ ಬಸ್ಸನ್ನು! ಇದನ್ನು ನಮ್ಮ ಆಳು ಮುದರ ‘ದೆತ್ತ್ ಪಾಡಿ ಪರತ್ತ್ ಮೋಟಾರ್ ಸರ್ವಿಸ್!’ ಅಂದರೆ ನಿಕೃಷ್ಟವಾದ ಹಳೆಯ ಮೋಟಾರ್ ಸರ್ವಿಸ್ ಅಂತ ಕರೆಯುತ್ತಾ ಇದ್ದ!
ಪ್ರತೀ ಸಾಯಂಕಾಲ ಮುದರ ಹಟ್ಟಿಯ ಏಕೈಕ ಹೊರಬಾಗಿಲನ್ನು ಒಳಗಿನಿಂದ ಅಗಳಿ ಹಾಕಿ ಬಂದ್ ಮಾಡುತ್ತಾ ಇದ್ದ! ಆನಂತರ ಮನೆಯ ಅಂತರದ ಜಗಲಿ ಬಾಗಿಲಿನಿಂದ ಹೊರಗೆ ಹೋಗಿ, ಬಿದಿರಿನ ಕಣೆಗಳಿಂದ ಮಾಡಿದ ಬಲವಾದ ತಟ್ಟಿಯೊಂದನ್ನು ಹಟ್ಟಿಯ ಬಾಗಿಲಿನ ಮಲಿದ್ದ ಮದನ ಕೈಗಳಿಗೆ ಹಗ್ಗದಿಂದ ಬಿಗಿದು ಕಟ್ಟುತ್ತಾ ಇದ್ದ. ಹೀಗೆ ಮಾಡದೇ ಇದ್ದರೆ ಕೆಲವೊಮ್ಮೆ ಹಸಿದ ಹೆಬ್ಬುಲಿಗಳು (ಪಟ್ಟೆ ಹುಲಿಗಳು) ಆ ಬಾಗಿಲಿಗೆ ತಮ್ಮ ಬಲವಾದ ಪಂಜಾದಿಂದ ಹೊಡೆದು ಎಷ್ಟು ದಪ್ಪದ ಬಾಗಿಲನ್ನಾದರೂ ಮುರಿದು ಒಳಬಂದು ದನಗಳನ್ನು ಕೊಂದು ಕಾಡಿಗೆ ಒಯ್ದು ತಿನ್ನುತ್ತಾ ಇದ್ದುವಂತೆ!
ನಾವು ಕೆಲವೊಮ್ಮೆ ರಾತ್ರಿಯ ಹೊತ್ತು ಹುಲಿಯ ಆರ್ಭಟವನ್ನು ಕೇಳುತ್ತಾ ಇದ್ದೆವು. ನನ್ನ ಅಜ್ಜ ಆನೆಕಾಲು ರೋಗದಿಂದ ಬಳಲುತ್ತಾ ಇದ್ದರು. ಅವರಿಗೆ ಬೇಗನೆ ನಡೆಯಲು ಸಾಧ್ಯವಾಗುತ್ತಾ ಇರಲಿಲ್ಲ. ಮನೆಯಲ್ಲಿ ಬಂದೂಕು ಇದ್ದರೂ ಅವರು ಹುಲಿಗಳನ್ನು ಹೊಡೆಯಲು ಶಕ್ತರಾಗಿ ಇರಲಿಲ್ಲ. ನಾವು ಹುಲಿಯ ಆರ್ಭಟ ಕೇಳಿದರೆ "ನಮ್ಮ ಹಟ್ಟಿಗೆ ಅದು ಬರಲಾರದು!" ಅಂತ ಧೈರ್ಯ ಮಾಡಿ ಹೊದ್ದು ಮಲಗುತ್ತಾ ಇದ್ದೆವು. ನಮ್ಮ ಅಜ್ಜ ನಿದ್ರೆಯಿಂದ ಎಚ್ಚತ್ತು ಟಾರ್ಚ್ ಹಾಯಿಸಿ ಹುಲಿ ಕಾಣುತ್ತದೋ? - ಅಂತ ನೋಡುತ್ತಾ ಇದ್ದರು. ನನ್ನ ಮಾವಂದಿರು ಕೆಲಸದ ನಿಮಿತ್ತ ಪರ ಊರುಗಳಲ್ಲಿ ನೆಲೆಸಿದ್ದರು.
ಅಜ್ಜ ತಮ್ಮ ತಾರುಣ್ಯದಲ್ಲಿ ಹುಲಿ ಶಿಕಾರಿ ಮಾಡಿದವರೇ! ಅವರು ಕೊಂದ ಒಂದು ಪಟ್ಟೆ ಹುಲಿಯ ತಲೆ ಬುರುಡೆಯೊಂದು ನಮ್ಮ ಮನೆಹಿಂದಿನ ಮಾವಿನ ಮರದಲ್ಲಿ ಒಂದು ತಂತಿ ಕಟ್ಟಿ ನೇತು ಹಾಕಲ್ಪಟ್ಟಿತ್ತು! ಯಾವುದಾದರೂ ಮನುಷ್ಯ ಅಥವಾ ದನಕ್ಕೆ ಹುಲಿಯ ಉಗುರು ಅಥವಾ ಹಲ್ಲು ನಾಟಿ ನಂಜಾದರೆ, ಆ ಹುಲಿಯ ತಲೆಬುರುಡೆಯನ್ನು ಇತರೇ ನಂಜು ನಿವಾರಕ ಔಷದೀಯ ವಸ್ತುಗಳೊಡನೆ ತೆಯ್ದು ಹಚ್ಚುತ್ತಾ ಇದ್ದರು.
ಒಮ್ಮೆ ಹಗಲು ಹೊತ್ತಿನಲ್ಲೇ ಮೇಯಲು ಹೋಗಿದ್ದ ನಮ್ಮ ಮನೆಯ ಗೌರಿ ಎಂಬ ಬಲವಾದ ದೊಡ್ದ ದನವನ್ನು ಪಟ್ಟೆಹುಲಿಯೊಂದು ಕೊಲ್ಲಲು ಪ್ರಯತ್ನಿಸಿತು. ಬಲವಾದ ಆ ದನ ಹ್ಯಾಗೋ ಹುಲಿಯಿಂದ ತಪ್ಪಿಸಿಕೊಂಡು ಮನೆಯವರೆಗೆ ಬಂತು! ಅದರ ಮೈ ತುಂಬಾ ಹುಲಿ ಪರಚಿದ ಗಾಯ! ಅದರ ಗಂಗೆ ತೊಗಲು ಹುಲಿಯು ಕಚ್ಚಿದಾಗ ಹರಿದೇ ಹೋಗಿತ್ತು. ಆ ಸಾಧು ದನವು ನಮ್ಮ ಅಜ್ಜ ಗಾಯಕ್ಕೆ ಹೊಲಿಗೆ ಹಾಕಿದಾಗ ಗಲಾಟೆ ಮಾಡದೇ ನಿಂತಿತ್ತು! ಅಜ್ಜಿಯು ಹಟ್ಟಿಯ ಹೊರಗಿದ್ದ ತೇಯುವ ಕಲ್ಲಿನ ಮೇಲೆ ಬೇಗ ಬೇಗನೇ ನಂಜಿನ ಔಷದವನ್ನು ಸಿದ್ಧಮಾಡಿ ಹುಲಿಯ ತಲೆಬುರುಡೆಯನ್ನು ಅದರ ಮೇಲಿಟ್ಟು ತೇಯ್ದರು. ಈ ಔಷದವನ್ನು ಹತ್ತು ದಿನ ಎಡೆಬಿಡದೇ ಎರಡು ಹೊತ್ತು ಹಚ್ಚಿದನಂತರ ನಮ್ಮ ಗೌರಿ ದನ ಸಂಪೂರ್ಣ ಗುಣಮುಖ ಆಯಿತು.
ಆಗ ನಾನು ಸಂತೋಷದಿಂದ ಕುಣಿದೆ.
ನಾನು ದೊಡ್ದದಾದ ಮೇಲೆ ಆ ದನ ಹಿಡಿಯುವ ಹುಲಿಯನ್ನು ಅಜ್ಜನ ಬಂದೂಕು ಬಳಸಿ ಕೊಲ್ಲುವೆ! - ಎಂದು ಆ ದಿನ ಶಪಥ ಮಾಡಿದೆ.
ನನಗೆ ಅಜ್ಜನ ಬಂದೂಕು ಪಾರಂಪರಿಕವಾಗಿ ಸಿಗಲಿಲ್ಲ. ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಆ ಹುಲಿಯೂ ನನಗಾಗಿ ಕಾದು ಕಾದು ಸೋತು ಕೊನೆಗೊಮ್ಮೆ ವೃದ್ಧಾಪ್ಯದಿಂದ "ಬಹು ನಿರಾಶೆ ಪಟ್ಟು" ಸತ್ತೇ ಹೋಗಿರಬೇಕು!
ಚಿತ್ರಗಳು: ಲೇಖಕರವು

Tuesday, July 21, 2009

ಈಗ ಚಂದ್ರೋದಯ! ಜೊತೆಗೆ ವಿರಹ!

‘ನಾಳೆ ಸೂರ್ಯಗ್ರಹಣವಾಗುತ್ತಿದೆ, ಈಗೆಂತ ಚಂದ್ರೋದಯ?’ ಎಂದುಕೊಳ್ಳಬೇಡಿ.
ಚಂದ್ರ ಉದಯವಾದರೇನೇ ಸೂರ್ಯಗ್ರಹಣವಾಗಲು ಸಾಧ್ಯ!
ಜೊತೆಗೆ ಚಂದ್ರಲೋಕಕ್ಕೆ ಮಾನವ ಕಾಲಿರಿಸಿ ನಲವತ್ತು ವರ್ಷಗಳೂ ಕಳೆದೊಹೋದವು.
ಆದರೆ ನಾನು ಹೇಳಲು ಹೊರಟಿರುವುದು ಗ್ರಹಣದ ಅಥವಾ ಚಂದ್ರಯಾನದ ವಿಷಯವನ್ನಲ್ಲ.
ಮಹಾನ್ ಗಿರಿಕಂದರಗಳಿಂದ ಕೂಡಿದ ಚಂದ್ರ ನಮ್ಮ ಕವಿಗಳಿಗೆ ಮಾತ್ರ ಅತಿ ಸುಂದರ! ಈ ಹಿನ್ನೆಲೆಯಲ್ಲಿ ಒಂದು ಚಂದ್ರೋದಯದ ವರ್ಣನೆಯನ್ನು ನಿಮಗೆ ಪರಿಚಯಿಸುವ ಇರಾದೆ ನನ್ನದು.
ನಾನು ಹೇಳಲು ಹೊರಟಿರುವ ಚಂದ್ರೋದಯದ ವರ್ಣನೆ ಬಂದಿರುವದು ಪಂಪಭಾರತದ ನಾಲ್ಕನೇ ಆಶ್ವಾಸದಲ್ಲಿ. ಅರ್ಜುನ ದೇಶಸಂಚಾರ ಮಾಡುತ್ತಾ ಕೃಷ್ಣ-ಬಲರಾಮರ ದ್ವಾರಕೆಗೆ ಬರುತ್ತಾನೆ. ಅವನಿಗೆ ಭವ್ಯವಾದ ಸ್ವಾಗತ ದೊರೆಯುತ್ತದೆ. ಆಗ ಮೊದಲ ಭಾರಿಗೆ ಸುಭದ್ರೆ ಮತ್ತು ಸರ್ಜುನರ ದೃಷ್ಟಿಗಳು ಪರಸ್ಪರ ಸಂಧಿಸುತ್ತವೆ. ಆನಂತರ, ಸ್ಥಿರತೆಗೆ ಸಂಕೇತವಾದ ಸೂರ್ಯ ಅಸ್ತಮಿಸುತ್ತಾನೆ. ಚಂಚಲತೆಗೆ ಸಂಕೇತವಾದ ಚಂದ್ರೋದಯವಾಗುತ್ತದೆ. ಜೊತೆಗೆ, ಚಂಚಲತೆಯನ್ನುಂಟು ಮಾಡುವ ವಿರಹ ಅರ್ಜುನ ಸುಭದ್ರೆ ಇಬ್ಬರಲ್ಲೂ ಉಂಟಾಗುತ್ತದೆ. ಅವರಿಬ್ಬರ ತೀವ್ರವಾದ ವಿರಹಕ್ಕೆ ಕಾರಣವಾದ ಅವತ್ತಿನ ಚಂದ್ರೋದಯವನ್ನು ಪಂಪ ಹೇಗೆ ಕಂಡರಿಸಿದ್ದಾನೆ ಎಂಬುದನ್ನು ಅರಿಯುವುದೇ ಈ ಲೇಖನದ ಉದ್ದೇಶ.
ಸೂರ್ಯಾಸ್ತವಾದ ಕೆಲ ಸಮಯದಲ್ಲಿಯೇ ‘ದಿತಿಸುತಂ ಮಸಿಯಿಂದಂ ಜಗಮೆಲ್ಲಮಂ ಮುಂ ಪೂಳ್ದನೋ’ (ರಾಕ್ಷಸನು ಜಗತ್ತೆಲ್ಲವನ್ನೂ ಮಸಿಯಿಂದ ಮುಚ್ಚಿಬಿಟ್ಟನೋ), ಎಂಬ ರೀತಿಯಲ್ಲಿ ಕತ್ತಲು ಆವರಿಸಿಬಿಟ್ಟಿದೆ. ಆಗ ‘ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನ್ ಅಲೆಯಲ್ ಆರಾದವು’ (ತಾರಾಸಮೂಹಗಳು ದಿಕ್ಕುಗಳೆಂಬ ಹೆಣ್ಣುಗಳು ತೊಟ್ಟಿರುವ ಮಾಣಿಕ್ಯಗಳಂತೆ ಆಕಾಶಾದಾದ್ಯಂತ ಬೆಳಗಿದರೂ ಆ ಕತ್ತಲೆಯನ್ನು ಕಳೆಯಲಾಗಲಿಲ್ಲ). ಅಂತಹ ಸಂದರ್ಭದಲ್ಲಿ ಒಳಗೆ ದೀಪಗಳನ್ನು ಉರಿಯಿಸುತ್ತಿದ್ದ ಉಪ್ಪರಿಗೆ ಮನೆಗಳು (ತಮೋರಾಜಕಂ ಮುಳಿದು ಸೆಱೆಗೆಯ್ದ ಬೆಳಗಿನ ಸೆಱೆಯ ಮನೆಗಳನ್ನವಾದುವು) ‘ಕತ್ತಲೆ ಎಂಬ ರಾಜನು ಕೋಪದಿಂದ ಬೆಳಕನ್ನು ಬಂದಿಸಿಟ್ಟಿರುವ ಸೆರೆಮನೆ’ಗಳಂತೆ ಕಾಣುತ್ತಿದ್ದವಂತೆ!
ಆಗ ಪೂರ್ವದಿಗಂತದಲ್ಲಿ ಚಂದ್ರೋದಯವಾಗುತ್ತದೆ. ಅದು ಹೇಗಿತ್ತು?
ಅದು ಕೆಂಪು ಕೆಂಪಾಗಿತ್ತು. ಚಂದ್ರ ಕೂಡಾ ಕೆಂಪಾಗಿದ್ದ. ಅದೂ ಎಂತಹ ಕೆಂಪು? (ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಮಾದಂತೆ) ಸಿಂಹದಿಂದ ಸೀಳಲ್ಪಟ್ಟ ಜಿಂಕೆಯ ರಕ್ತರಾಶಿಯಿಂದ ತುಂಬಿದ ಕೆಂಪು!
ಚಿತ್ರಕೃಪೆ: ಅಂತರಜಾಲ

ಸಂಜೆ ಅಥವಾ ಸಂಧ್ಯಾ ಎಂಬ ಪರಸ್ತ್ರೀಯಲ್ಲಿ ಸೇರಿದ್ದಕ್ಕೆ ಚಂದ್ರನ ಹೆಂಡತಿಯಾದ ರೋಹಿಣಿ ಚಂದ್ರನಿಗೆ ಒದೆಯುತ್ತಾಳೆ. (ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನ್ ಆತ್ಮಾಂಗದೊಳ್ ರೋಹಿಣೀ ಚರಣಾಲಕ್ತಕ ರಾಗಮಚ್ಚಿದುದೋ) ಆಗ ಅವಳ ಕಾಲಿಗೆ ಹಚ್ಚಿದ್ದ ಕೆಂಪು ಬಣ್ಣ ಚಂದ್ರನಿಗೂ ವ್ಯಾಪಿಸಿದ್ದರಿಂದ ಚಂದ್ರೋದಯದ ಸಮಯದಲ್ಲಿ ಕೆಂಪು ಬಣ್ಣವುಂಟಾಗುತ್ತದಂತೆ!
ಚಂದ್ರ ಅಥವಾ ಚಂದ್ರನಲ್ಲಿ ಕಾಣುವ ಜಿಂಕೆಯು ಕತ್ತಲೆ ಎಂಭ ಆನೆಯ ಕೊಂಬಿನಿಂದ ಗಾಯಗೊಂಡಿದ್ದರಿಂದ (ತಮೋಗಜದ ಕೋಡೇಱಂದಮೇಂ ನೊಂದುದೋ ಹರಿಣಂ) ಅಷ್ಟೊಂದು ಕೆಂಪಾಗಿಬಿಟ್ಟಿದೆಯಂತೆ!
ಸ್ವಲ್ಪ ಕಾಲದ ನಂತರ ಚಂದ್ರ ಕೆಂಪುಬಣ್ಣ ಕಳೆದು ಸಹಜ ಬೆಳಕಿನ ಬಣ್ಣಕ್ಕೆ ತಿರುಗುತ್ತಾನೆ.

ಚಿತ್ರಕೃಪೆ: ಅಂತರಜಾಲ

ಅದಕ್ಕೆ ಕಾರಣವೇನು?
ಬೆಂಳದಿಂಗಳು ಪ್ರೇಮಿಗಳಲ್ಲಿ ವಿರಹವನ್ನು ಹೆಚ್ಚಿಸುತ್ತದಂತೆ. ಅವರಲ್ಲಿ ಸೇರುವ ಬಯಕೆಯನ್ನು ವೃದ್ಧಿಸುತ್ತದಂತೆ. ಚಂದ್ರ ತನ್ನ ಕೆಂಪು ಬಣ್ಣವನ್ನು ಪ್ರೇಮಿಗಳಿಗೆ/ವಿರಹಿಗಳಿಗೆ ಹಂಚಿಕೊಟ್ಟಿದ್ದರಿಂದ (ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ) ತಾನು ಬೆಳ್ಳಗಾದನಂತೆ!
ಚಂದ್ರೋದಯ ಪೂರ್ಣವಾಯಿತು. ಅವನ ನಡುವಿನ ಕಪ್ಪು ಕಲೆ ಹೇಗೆ ಕಾಣುತ್ತಿತ್ತು?
(ಗೆಳೆಯ ಮಲ್ಲಿಕಾರ್ಜುನ್ ತೆಗೆದಿರುವ ಫೋಟೋ ನೋಡಿ. ಆ ಕಲೆ ಕರ್ನಾಟಕ ಭೂಪಟದಂತೆ ಕಾಣುತ್ತದೆ!)

ಚಿತ್ರಕೃಪೆ: ಡಿ.ಜಿ.ಮಲ್ಲಿಕಾರ್ಜುನ್

ಆದರೆ ಪಂಪನಿಗೆ!?
ಈಶ್ವರನ ಶಾಪದಿಂದ ಸುಟ್ಟು ಹೋಗಿ, ಮತ್ತೆ ಅವನ ಅನುಗ್ರಹದಿಂದಲೇ ಅನಂಗನಾಗಿ ಪುನರ್ಜನ್ಮವೆತ್ತಿದ ಮನ್ಮಥನಿಗೆ ಪುಣ್ಯಸ್ನಾನ ಮಾಡಿಸುವುದಕ್ಕೆ ಚಂದ್ರಕಾಂತ ಶಿಲೆಯಲ್ಲಿ ಮಾಡಿದ ಪಾತ್ರೆಯಲ್ಲಿ ನೀರನ್ನು ತುಂಬಿಸಿದ್ದಳಂತೆ. ಆ ನೀರು ಸುವಾಸನಾಯುಕ್ತವಾಗಲು ಕನ್ನೈದಿಲೆ ಪುಷ್ಪವನ್ನು ಹಾಕಿದ್ದಳಂತೆ. (ಚಂದ್ರಕಾಂತ ಘಟದೊಳ್ ತಂದೞಳ್ತಿಯಿಂ ಪುಷ್ಪ ವಾಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞಳ್ಪಿಂದುವಾ) ಚಂದ್ರಕಾಂತ ಶಿಲೆಯ ಪಾತ್ರೆಯ ನಡುವೆ ತೇಲುತ್ತಿರುವ ಕನ್ನೈದಿಲೆ ಪುಷ್ಪದಂತೆ, ಈ ಪೂರ್ಣ ಚಂದ್ರನ ನಡುವಿನ ಕಲೆ ಕಾಣುತ್ತಿತ್ತು, ನಮ್ಮ ಪಂಪನಿಗೆ!
ಮೇಲೇರಿ ಬರುತ್ತಿದ್ದ ಚಂದ್ರನ ಪ್ರಕಾಶ ಹೇಗಿತ್ತು? ಅದೂ ಈ ಭೂಲೋಕದ ಪ್ರೇಮಿಗಳ ಕಣ್ಣಿಗೆ ಹೇಗೆ ಕಣುತ್ತಿತ್ತು?
ಭೂಮಿ ಅಂತರಿಕ್ಷಗಳನ್ನು ಚಂದ್ರನ ಬೆಳಕು ಆವರಿಸಿತ್ತು. ಅಷ್ಟೊಂದು ಬೆಳಕನ್ನು ಸುರಿಸುತ್ತಿಒರುವ ಚಂದ್ರ ಈ ವಿರಹಿಗಳ/ಪ್ರೇಮಿಗಳ ಕಣ್ಣಿಗೆ, ಮನ್ಮಥನು ನಮ್ಮನ್ನು ಹುಡುಕಲು ತಂದಿರುವ (ಮದನನ ಸೋದನ ದೀವಿಗೆ) ಕೈದೀಪದಂತೆ ಕಾಣುತ್ತಿತ್ತಂತೆ! ಅಷ್ಟರ ಮಟ್ಟಿಗೆ ಚಂದ್ರ ಆಕಾಶದ ನೀಲಿ ತಟ್ಟೆಯಲ್ಲಿ ಹೊಳೆಯುತ್ತಿದ್ದ.
ಇದಿಷ್ಟು ಪಂಪ ಚಂದ್ರೋದಯದ ವಿವಿಧ ಹಂತಗಳನ್ನು ಕುರಿತು ಮಾಡಿರುವ ಕಲ್ಪನೆ. ಇಲ್ಲಿಂದ ಮುಂದಕ್ಕೆ, ಚಂದ್ರದೋಯದ ಹಿನ್ನೆಲಯಲ್ಲಿ, ಅರ್ಜುನ ಸುಭದ್ರೆಯರ ಮನಸ್ಸಿನಲ್ಲಿ ನಡೆಯುವ ವಿರಹ ವ್ಯಪಾರವನ್ನು, ಮಾನಸಿಕ ತಾಕಲಾಟವನ್ನು ಕವಿ ಚಿತ್ರಿಸಿದ್ದಾನೆ. ಅದರ ವರ್ಣನೆಯ ಅಗತ್ಯ ಇಂದಿನ ನಮಗೆಲ್ಲಾ ಅನಾವಶ್ಯಕವೆಂದು ಹೇಳಬಹುದೇ? ಏಕೆಂದರೆ, ಶೃಂಗಾರ ಅಥವಾ ಬಾಂಧವ್ಯಕ್ಕೆ ಸಂಬಂಧಿಸಿದಂತೆ ನಾವೆಲ್ಲಾ ಒಂದಲ್ಲ ಒಂದು ಸಮಯದಲ್ಲಿ ವಿರಹವನ್ನು ಅನುಭವಿಸಿದವರೇ ಅಲ್ಲವೇ!?

Thursday, July 16, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 20

ಜಾತ್ರೆ, ಚಂದಾ ವಸೂಲಿ
ಕುಂದೂರುಮಠದಲ್ಲಿ ವರ್ಷಕ್ಕೊಮ್ಮೆ ಷಷ್ಟಿಜಾತ್ರೆ ನಡೆಯುತ್ತಿದ್ದುದ್ದನ್ನು ಮೊದಲೇ ಹೇಳಿದ್ದೇನೆ. ಸುತ್ತಮುತ್ತಲಿನ ಹಳ್ಳಿಯವರಿಗೆ ಅದೊಂದು ಪ್ರಮುಖ ಜಾತ್ರೆಯಾಗಿತ್ತು. ಸುಬ್ರಹ್ಮಣ್ಯನ ಹೆಸರಿನಲ್ಲಿ ಜಾತ್ರೆ ನಡೆಯುತ್ತಿದ್ದರೂ, ರಂಗನಾಥಸ್ವಾಮಿ ಮತ್ತು ಮೆಳೆಯಮ್ಮನ ದೇವಾಲಯಗಳಿಗೂ ಜನ ವಿಪರೀತ ಸೇರುತ್ತಿದ್ದರು. ನೂರಾರು ವಿವಿಧ ರೀತಿಯ ಅಂಗಡಿಗಳು, ಹತ್ತಾರು ಮಿಠಾಯಿ ಅಂಗಡಿಗಳು, ರಾಟೆ ತೊಟ್ಲು, ಗಿರಗಟ್ಟೆ, ತಡಿಕೆ ಹೋಟೆಲ್ ಇತ್ಯಾದಿಗಳೆಲ್ಲಾ ಸೇರಿ ಜಾತ್ರೆಯ ಆಕರ್ಷಣೆ ಹೆಚ್ಚಾಗಿರುತ್ತಿತ್ತು. ಸಿನಿಮಾದ ಹುಚ್ಚು ಹಬ್ಬಿದ್ದನ್ನು ಮೊದಲೆ ಹೇಳಿದ್ದೇನೆ. ಹೀಗೆ, ಜಾತ್ರೆಯಲ್ಲಿ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ಅಂಗಡಿಯವರು ಮಠಕ್ಕೆ ಇಂತಿಷ್ಟು ಎಂದು ಹಣ ಕೊಡಬೇಕಾಗಿತ್ತು. ಜಾತ್ರೆ ನಡೆಯುವಾಗಲೇ ಈ ಹಣವನ್ನು ಮಠದವರು ಸಂಗ್ರಹಿಸಿಬಿಡುತ್ತಿದ್ದರು.
ಸಾಮಾನ್ಯವಾಗಿ ಜಾತ್ರೆಯ ದಿನಗಳಲ್ಲಿ ಒಂದು ವಾರ ರಜವಿದ್ದರೂ ಹೆಚ್ಚಿನ ಹಾಸ್ಟೆಲ್ ಹುಡುಗರು ಊರಿಗೆ ಹೋಗುತ್ತಿರಲಿಲ್ಲ. ಜಾತ್ರೆಗೆಂದೇ ದುಡ್ಡನ್ನು ಉಳಿತಾಯ ಮಾಡಿಟ್ಟುಕೊಂಡಿದ್ದವರು ಒಂದೆರಡು ದಿನದಲ್ಲಿಯೇ ಖರ್ಚು ಮಾಡಿಕೊಂಡು, ಅಂಗಡಿ ಬೀದಿಯಲ್ಲಿ ಅಲೆಯುತ್ತಾ ಕಾಲ ಕಳೆಯುತ್ತಿದ್ದರು. ಆದರೆ ನಾವು ಹತ್ತನೇ ತರಗತಿಯಲ್ಲಿದ್ದಾಗ, ವಾರ್ಡನ್ನರ ಪ್ರಚೋದನೆಯಿಂದ ಸ್ವಾಮೀಜಿಯವರಲ್ಲಿಗೆ, ನನ್ನ ನೇತೃತ್ವದಲ್ಲಿ ಹುಡುಗರ ಒಂದು ಗುಂಪನ್ನು ಕರೆದುಕೊಂಡು ಹೋಗಿದ್ದೆ. ಸ್ವಾಮೀಜಿಯವರಲ್ಲಿ ನಮ್ಮ ಬೇಡಿಕೆ ಸರಳವಾಗಿತ್ತು. ಅದೆಂದರೆ, ‘ಜಾತ್ರೆಗೆ ಸಂಬಂಧಪಟ್ಟ ಸಣ್ಣಪುಟ್ಟ ಕೆಲಸಗಳಿಗೆ ಹಾಸ್ಟೆಲ್ ಹುಡುಗರನ್ನು ಅವರು ಬಳಸಿಕೊಂಡಿದ್ದರಿಂದ, ಹುಡುಗರಿಗೆ ಒಂದಷ್ಟು ಮಿಠಾಯಿ, ಹಣ್ಣು ಮೊದಲಾದವುಗಳನ್ನು ಕೊಡಿಸಿ’ ಎಂಬುದಾಗಿತ್ತು.
ಹಾಗೆ ನೋಡಿದರೆ ನಾವು ಮಠಕ್ಕೆ ಅಂತಹ ಕೆಲಸವನ್ನೇನು ಮಾಡಿಕೊಟ್ಟಿರಲಿಲ್ಲ. ಜಾತ್ರೆ ಶುರುವಾಗುವ ಮೊದಲು ಹದಿನೈದು ದಿನಗಳ ಮುಂಚೆ ಒಂದು ವಿಧಿಯನ್ನು ನಡೆಸುತ್ತಾರೆ. ಅದಕ್ಕೆ ‘ಎಣ್ಣೆಸೀರೆ ಸುಡುವುದು’ ಎಂದು ಹೆಸರು. ಈ ‘ಎಣ್ಣೆ ಸೀರೆ ಸುಡುವ ಕಾರ್ಯ’ಕ್ಕೆಂದೇ ಕೆಲವು ರೈತಾಪಿ ಜನಗಳು ಒಂದೆರಡು ಸೇರು ಹರಳನ್ನು (ಹಳ್ಳನ್ನು) ಮಠಕ್ಕೆ ಕಾಣಿಕೆ ಎಂದು ಕೊಡುತ್ತಿದ್ದರು. ಆಗ ಕೊಟ್ಟ ಹರಳೇ ಸುಮಾರು ಮೂರ್‍ನಾಲ್ಕು ಕ್ವಿಂಟಾಲ್ ಆದರೂ ಆಗುತ್ತಿದ್ದವು. ಆದರೆ ಆ ವಿಧಿಗೆ ಬಳಸುತ್ತಿದ್ದುದ್ದು ಕೇವಲ ಒಂದೆರಡು ಲೀಟರ್ ಎಣ್ಣೆ ಮಾತ್ರ! ಹೊಸ ರೇಷ್ಮೆ ಸೀರೆ ಎಂದು ಹೇಳುತ್ತಿದ್ದರೂ, ಅದು ರೇಷ್ಮೆಯದ್ದಾಗಿರದೆ, ಮೆಳೆಯಮ್ಮನಿಗೆ ಯಾವುದೋ ಭಕ್ತರು ತಂದುಕೊಡುತ್ತಿದ್ದ ಇಪ್ಪತ್ತು-ಮೂವತ್ತು ರೂಪಾಯಿ ಬೆಲೆಯ ಸೀರೆಯಾಗಿರುತ್ತಿತ್ತು!
ಎಣ್ಣೆ ಸೀರೆ ಸುಡುವ ರಾತ್ರಿಯಂದು, ಸುಬ್ರಹ್ಮಣ್ಯನ ಉತ್ಸವಮೂರ್ತಿಯನ್ನು ಅಡ್ಡೆಯಲ್ಲಿ ಹೊತ್ತು, ಮೆರವಣಿಗೆಯಲ್ಲಿ ಕರೆದುಕೊಂಡು ಎರಡೂ ಸುಬ್ಬಪ್ಪನ ಗುಡಿಗಳ ಮೂಲಸ್ಥಾನದಲ್ಲಿ ಪೂಜೆ ಮಾಡಿಸಿ, ಕೆಳಗಿನ ಸುಬ್ಬಪ್ಪನ ಗುಡಿಯ ಬಳಿ ಒಂದು ಹೊಸ ಸೀರೆಗೆ, ಒಂದೆರಡು ಲೀಟರ್‌ನಷ್ಟು ಹರಳೆಣ್ಣೆ ಹಾಕಿ ಸುಟ್ಟು ಅದರಿಂದ ಉತ್ಪಾದನೆಯಾಗುವ ಕರಿ(ಮಸಿ)ಯನ್ನು ಸಂಗ್ರಹಿಸುವುದೇ ಆ ವಿಧಿ. ಹಾಗೆ ಸಂಗ್ರಹಿಸಿದ ಕಪ್ಪನ್ನು ಸ್ವಾಮೀಜಿಗಳು ಬಂದ ಭಕ್ತರ ಹಣೆಗೆ ಹಚ್ಚಿ ಆಶೀರ್ವದಿಸುತ್ತಿದ್ದರು.
ಹಾಗೆ ಅಡ್ಡೆದೇವರುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು, ಅದು ರಾತ್ರಿ ವೇಳೆಯಾದ್ದರಿಂದ ಬೇರೆ ಹಳ್ಳಿಯ ಜನರು ಬರುತ್ತಿದ್ದುದ್ದು ಕಡಿಮೆ. ಆಗ ಹಾಸ್ಟೆಲ್ ಹುಡುಗರನ್ನು ಕರೆಯುತ್ತಿದ್ದರು. ಸ್ವಲ್ಪ ಬಲಿಷ್ಠರಾಗಿದ್ದ ನಾವು ಅನೇಕರು ಅಡ್ಡೆ ದೇವರನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದೆವು. ಆ ಘನಕಾರ್ಯವನ್ನೇ ನಾವು ಮುಂದಿಟ್ಟುಕೊಂಡು ಮಿಠಾಯಿಯನ್ನು ಕೊಡಿಸುವಂತೆ ಸ್ವಾಮೀಜಿಗಳಲ್ಲಿ ಬೇಡಿಕೆ ಇಟ್ಟಿದ್ದು. ಅದಕ್ಕೆ ವಾರ್ಡನ್ ಚಿತಾವಣೆ ಬೇರೆ!
ವಾರ್ಡನ್ ಮತ್ತು ನಾವು ಚಾಪೆಯ ಕೆಳಗೆ ನುಸುಳಿದರೆ, ಸ್ವಾಮಿಜಿಗಳಿಬ್ಬರೂ ರಂಗೋಲಿಯ ಕೆಳಗೆ ನುಸುಳಿದ್ದರು. ಸ್ವಲ್ಪ ಜಿಪುಣರೂ ದುರಾಸೆಯವರೂ ಆಗಿದ್ದ ಅವರು ತಮ್ಮ ಕಡೆಯಿಂದ ಒಂದೂ ನಯಾಪೈಸೆ ಕೊಡದೆ ನಮ್ಮ ಬೇಡಿಕೆ ಈಡೇರಿಸಿಬಿಟ್ಟಿದ್ದರು! ಒಂದು ಚೀಟಿಯಲ್ಲಿ, ಎಲ್ಲಾ ಮಿಠಾಯಿ ಅಂಗಡಿಯವರೂ ಅರ್ಧರ್ಧ ಕೇಜಿ ಮಿಠಾಯಿಯನ್ನು ನಮಗೆ ಕೊಡಬೇಕೆಂದು ಬರೆದು, ಮಿಠಾಯಿ ಅಂಗಡಿಯವರಿಗೆ ಬರೆ ಎಳೆದಿದ್ದರು. ಹಾಗೇ ಕಡ್ಲೆಪುರಿ, ಕಾರ, ಬತ್ತಾಸು, ಮಾರುವವರಿಗೆ ಒಂದು ಚೀಟಿಯನ್ನು ಬರೆದು ಅವರೂ ಇಂತಿಷ್ಟು ಕೊಡಬೇಕೆಂದು ಫರ್ಮಾನು ಹೊರಡಿಸಿದ್ದರು. ಬಾಳೇಹಣ್ಣನ್ನು ಮಾರುವ ಅಂಗಡಿಗಳಿಗೆ ಒಂದು ಚೀಟಿಯನ್ನು ಬರೆದುಕೊಟ್ಟಿದ್ದರು.
ನಾವು ಏನೂ ಇಲ್ಲದಿರುವುದಕ್ಕಿಂತ ವಾಸಿ ಎಂದುಕೊಂಡು ಚೀಟಿಯನ್ನು ತೆಗೆದುಕೊಂಡು ಎಲ್ಲಾ ಮಿಠಾಯಿ ಅಂಗಡಿ ಮತ್ತು ಕಡ್ಲೆಪುರಿ ಅಂಗಡಿ ಬಾಳೇಹಣ್ಣಿನ ಅಂಗಡಿಗಳ ಬಳಿ ಹೋಗಿ ಚೀಟಿ ತೋರಿಸಿ ಕೇಳುತ್ತಿದ್ದೆವು. ಅವರು ಒಳಗೊಳಗೆ ಬಯ್ಯುತ್ತಲೇ ತಮಗೆ ತೋಚಿದಷ್ಟನ್ನು ಕೊಡುತ್ತಿದ್ದರು. ಹೀಗೆ ಸುಮಾರು ಐದಾರು ಕೇ.ಜಿ.ಯಷ್ಟು ಮಿಠಾಯಿಯನ್ನು ಇಪ್ಪತ್ತು ಲೀಟರಿಗೂ ಹೆಚ್ಚು ಕಡ್ಲೆಪುರಿ, ಒಂದೆರಡು ಕೇ.ಜಿ.ಯಷ್ಟು ಕಾರ, ನೂರಾರು ಬಾಳೇಹಣ್ಣುಗಳನ್ನು ನಾವು ಸಂಗ್ರಹಿಸಿದ್ದೆವು. ರಾತ್ರಿ ಹಾಸ್ಟೆಲ್ ಹುಡುಗರಿಗೆಲ್ಲಾ ಹಂಚಿದ್ದೆವು. ಇಷ್ಟೆಲ್ಲಾ ಕಷ್ಟ ಪಟ್ಟರೂ ಒಬ್ಬೊಬ್ಬರಿಗೆ ನೂರು ಗ್ರಾಮ್‌ನಷ್ಟು ಮಾತ್ರವೇ ಮಿಠಾಯಿ ಸಿಕ್ಕಿದ್ದು!
ಪಾಪಣ್ಣ ಅರ್ಧ ಕೆ.ಜಿ. ಜಿಲೇಬಿ ತಿಂದ!
ಇದೇ ಸಂದರ್ಭದಲ್ಲಿ ಮಿಠಾಯಿಯ ಬಗ್ಗೆ ವಿಪರೀತ ವ್ಯಾಮೋಹವಿದ್ದ ಪಾಪಣ್ಣ ಎಂಬುವವನು, ‘ಅರ್ಧ ಕೇ.ಜಿ. ಜಿಲೇಬಿಯನ್ನು ಒಬ್ಬನೇ ತಿನ್ನುತ್ತೇನೆ’ ಎಂದು ಸುರೇಶ ಎಂಬುವವನಲ್ಲಿ ಬೆಟ್ ಕಟ್ಟಿಬಿಟ್ಟ. ಪಾಪಣ್ಣ ತಿನ್ನದೇ ಇದ್ದರೆ, ಜಿಲೇಬಿಯ ಹಣ ಮತ್ತು ಐವತ್ತು ರೂಪಾಯಿಗಳನ್ನು ಸುರೇಶನಿಗೆ ಕೊಡಬೇಕಾಗಿತ್ತು. ತಿಂದರೆ ಜಿಲೇಬಿಯ ಹಣ ಜೊತೆಗೆ ಐವತ್ತು ರೂಪಾಯಿಯನ್ನು ಸುರೇಶ ಪಾಪಣ್ಣನಿಗೆ ಕೊಡಬೇಕಾಗಿತ್ತು. ಈ ಬೆಟ್ಟಿಂಗ್ ಅಲ್ಲದೆ ಪ್ರೇಕ್ಷಕರಾಗಿದ್ದ ನಾವು ಪಾಪಣ್ಣ ತಿನ್ನುತ್ತಾನೆ ಎಂದು, ತಿನ್ನುವುದಿಲ್ಲ ಎಂದು ಐದೋ ಹತ್ತೋ ರುಪಾಯಿ ಬೆಟ್ ಕಟ್ಟಿಕೊಂಡಿದ್ದೆವು.
ಹಿಂದೊಮ್ಮೆ ಇದೇ ಪಾಪಣ್ಣ, ಒಂದೇ ನಿಮಿಷದಲ್ಲಿ ಒಂದು ಪ್ಯಾಕ್ ಗ್ಲೂಕೋಸ್ ಬಿಸ್ಕೆಟ್ಟನ್ನು ತಿಂದು ಬೆಟ್ ಗಿದ್ದಿದ್ದ. ಒಂದು ಪ್ಯಾಕ್ ಬಿಸ್ಕೆಟ್ಟನ್ನು ಪೂರಾ ಒಂದೆರಡು ಗ್ಲಾಸ್ ನೀರಿನಲ್ಲಿ ಹಾಕಿ ಗಟಗಟನೆ ಕುಡಿದುಬಿಟ್ಟಿದ್ದ. ಅವನ ವಿರುದ್ಧ ಬೆಟ್ ಕಟ್ಟಿದ್ದವರು ಅದನ್ನು ಒಪ್ಪಿರಲಿಲ್ಲ. ಆದರೆ ವಾರ್ಡನ್ ಮಧ್ಯ ಪ್ರವೇಶದಿಂದ ಪಾಪಣ್ಣ ಗೆದ್ದಿದ್ದನ್ನು ತೀರ್ಮಾನಿಸಲಾಗಿತ್ತು. ಬೆಟ್ ಕಟ್ಟುವ ಮೊದಲು ನೀರು ಕುಡಿಯಬಾರದು ಎಂದು ಹೇಳಿಲ್ಲದಿದ್ದರಿಂದ ವಾರ್ಡನ್ ಪಾಪಣ್ಣನ ಪರವಾಗಿ ತೀರ್ಮಾನ ಕೊಟ್ಟಿದ್ದರು. ಆದ್ದರಿಂದ ನಾನು, ಈ ಭಾರಿಯೂ ಪಾಪಣ್ಣ ಗೆಲ್ಲುತ್ತಾನೆ ಎಂದು ಐದು ರೂಪಾಯಿ ಬೆಟ್ ಕಟ್ಟಿದ್ದೆ!
ಜಾತ್ರೆಯ ಐದನೇ ದಿನ ಸಂಜೆ, ಸರಿಯಾಗಿ ತೂಕ ಮಾಡಿದ ಅರ್ಧ ಕೇ.ಜಿ. ಜಿಲೇಬಿಯನ್ನು ತಂದು, ಸ್ಕೂಲ್ ಬಳಿಯಿದ್ದ ಒಂದು ಮರದ ಕೆಳಗೆ ಪಾಪಣ್ಣನಿಗೆ ಕೊಡಲಾಯಿತು. ಐದಾರು ರಾಗಿ ಮುದ್ದೆ, ಒಂದು ರಾಶಿ ಅನ್ನವನ್ನು ನಿತ್ಯವೂ ಧ್ವಂಸ ಮಾಡುತ್ತಿದ್ದ ಪಾಪಣ್ಣನಿಗೆ ಅದು ಕಷ್ಟವಾಗಿ ಕಾಣಲೇ ಇಲ್ಲ. ತಿನ್ನಲು ಪ್ರಾರಂಭಿಸಿ ಹದಿನೈದೇ ನಿಮಿಷದಲ್ಲೇ ಮುಕ್ಕಾಲು ಪಾಲು ಮುಗಿಸಿಬಿಟ್ಟಿದ್ದ. ನಂತರ ಶುರುವಾಯಿತು ನೋಡಿ ಅವನ ಕಷ್ಟ. ಕೈಯಲ್ಲಿದ್ದ ಜಿಲೇಬಿ ಬಾಯಿಗೆ ಹೋಗಲು ಮುಷ್ಕರ ಹೂಡುತ್ತಿತ್ತು. ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಹದಿನೈದು ಹದಿನಾರು ವರ್ಷದ ಹುಡುಗನೊಬ್ಬ ಅರ್ಧ ಕೇಜಿ ಜಿಲೇಬಿಯನ್ನು ತಿನ್ನುವುದು ಸಾಮಾನ್ಯವಾದ ವಿಚಾರವಾಗಿರಲಿಲ್ಲ. ಆತನ ಬಾಯಿತುಂಬಾ ಅರ್ಧಂಬರ್ಧ ಜಗಿದ ಜಿಲೇಬಿಯಿದ್ದರೆ ಕೈಯಲ್ಲಿಯೂ ಜಿಲೇಬಿಯಿತ್ತು. ತಟ್ಟೆಯಲ್ಲಿ ಇನ್ನೂ ಮೂರ್‍ನಾಲ್ಕು ಜಿಲೇಬಿಗಳು ಕುಳಿತಿದ್ದವು. ಅಷ್ಟಕ್ಕೆ ಆತ ತುಂಬಾ ಸೋತು ಹೋಗಿದ್ದ.
‘ಸ್ವಲ್ಪ ನೀರು ಕುಡಿ’ ಯಾರೋ ಸಲಹೆ ಕೊಟ್ಟರು. ‘ಸ್ವಲ್ಪ ಹೊತ್ತು ಎದ್ದು ಓಡಾಡಿ ಆಮೇಲೆ ತಿನ್ನು’ ಎಂದು ಇನ್ನಾರೋ ಸಲಹೆ ಕೊಟ್ಟರು. ಆದರೆ ಅದಕ್ಕೆ ಸುರೇಶನ ಆಕ್ಷೇಪಣೆಯಿತ್ತು. ‘ಕುಳಿತಲ್ಲಿಂದ ಏಳದೆ ತಿನ್ನಬೇಕು’ ಎಂದು ಆತ ಹಠ ಹಿಡಿದ. ಮೊದಲಿಗೆ ಇವ್ಯಾವುವೂ ನಿರ್ಧಾರವಾಗದಿದ್ದ ಕಾರಣ ವಾದವಿವಾದಗಳು ನಡೆದವು. ಇದರಿಂದಾಗಿ ಪಾಪಣ್ಣನೂ ಸ್ವಲ್ಪ ಸುಧಾರಿಸಿಕೊಂಡು, ‘ನಾನು ಮಧ್ಯೆ ಒಂದು ಮೆಣಸಿನಕಾಯಿ ತಿನ್ನುತ್ತೇನೆ’ ಎಂದ. ಸುರೇಶ ಅದಕ್ಕೂ ಒಪ್ಪದಿದ್ದಾಗ, ನಾವೆಲ್ಲಾ ಆತನನ್ನು ಒಪ್ಪಿಸಬೇಕಾಯಿತು. ಒಂದು ಮೆಣಸಿನ ಕಾಯಿಯನ್ನು ಹಾಗೇ ಕಚ್ಚಿ ಕಚಕಚ ತಿಂದ ಪಾಪಣ್ಣ ನಂತರ ಸರಾಗವಾಗಿ ಇನ್ನು ಎರಡು ಜಿಲೇಬಿಗಳನ್ನು ಮುಗಿಸಿಬಿಟ್ಟಿದ್ದ. ನಂತರ ತಟ್ಟೆಯಲ್ಲಿ ಉಳಿದಿದ್ದ ಎರಡು ಜಿಲೇಬಿಗಳನ್ನು ಎತ್ತಿಕೊಂಡು ಒಂದೇ ಬಾರಿಗೆ ಬಾಯಿಯಲ್ಲಿ ತುರುಕಿಕೊಂಡು ಜಿಗಿದು, ಒಂದಷ್ಟನ್ನು ನುಂಗಿ, ಒಂದಷ್ಟನ್ನು ಹಲ್ಲಿನ ಸಂದಿಯಲ್ಲೆಲ್ಲಾ ಸೇರಿಸಿಕೊಂಡು ‘ನಾನು ಗೆದ್ದೆ’ ಎಂದು ಕೂಗಿದ! ಸುರೇಶ ವಿಧಿಯಿಲ್ಲದೆ ಐವತ್ತು ರೂಪಾಯಿಗಳನ್ನು ಕೊಡಬೇಕಾಯಿತು.
ಪಾಪಣ್ಣ ಪಂದ್ಯವನ್ನು ಗೆದ್ದ ಖುಷಿ ಮತ್ತು ವಾತಾವರಣ ಅಂದು ರಾತ್ರಿಯ ಹೊತ್ತಿಗೆ ಇಲ್ಲವಾಗಿತ್ತು. ಆತನಿಗೆ ವಿಪರೀತ ಹೊಟ್ಟೆಉರಿ ಕಾಣಿಸಿಕೊಂಡಿತ್ತು. ಜೊತೆಗೆ ಭೇದಿಯೂ ಶುರುವಾಯಿತು. ನಾಲ್ಕಾರು ಬಾರಿ ಹೊರಗೆ ಹೋಗಿಬಂದ ಆತನನ್ನು ಐದನೇ ಬಾರಿಗೆ ಎತ್ತಿಕೊಂಡೇ ಕಕ್ಕಸ್ಸಿಗೆ ಕರೆದೊಯ್ಯಬೇಕಾಯಿತು. ಅಡುಗೆ ಮನೆಯಲ್ಲಿದ್ದ ಧರ್ಮಣ್ಣನನ್ನು ಎಬ್ಬಿಸಿ ವಿಷಯ ತಿಳಿಸಲಾಯಿತು. ಪಾಪಣ್ಣನ ಕಣ್ಣು ಮೇಲೆ, ಕೆಳಗೆ ಆಡಲು ಶುರುವಾಯಿತು. ಸುರೇಶ ಅಳುತ್ತಾ ಕುಳಿತಿದ್ದ. ನಾವೆಲ್ಲಾ ಕಂಗಾಲಾಗಿದ್ದೆವು. ಧರ್ಮಣ್ಣ ಒಂದಷ್ಟು ಮಜ್ಜಿಗೆ ತಂದು ಕುಡಿಸಿದ. ರಾತ್ರೋ ರಾತ್ರಿ ಮಠದ ತೋಟಕ್ಕೆ ಹೋಗಿ ಒಂದು ಎಳನೀರನ್ನು ತಂದು ಕುಡಿಸಿದರು. ರಾತ್ರಿಯ ವೇಳೆ ತೆಂಗಿನ ಮರವನ್ನು ಹತ್ತಬಾರದಂತೆ, ಕಾಯಿ ಕೀಳಬಾರದಂತೆ! ಹಾಗೇನಾದರು ಮಾಡಲೇ ಬೇಕಾದರೆ ಒಂದು ಬಿಂದಿಗೆ ನೀರನ್ನು ತೆಂಗಿನ ಮರಕ್ಕೆ ಹಾಕಬೇಕಂತೆ! ಆ ಅವಸರದಲ್ಲೂ ಆ ವಿಧಿಯನ್ನು ಮಾಡಲಾಯಿತು. ಬೆಳಗಿನ ಜಾವ ಒಂದು ಬಾರಿ ಜೋರು ವಾಂತಿಯಾಯಿತು. ನಂತರ ಮತ್ತಷ್ಟು ಎಳನೀರು ಕುಡಿಸಿ ಮಲಗಿಸಿದರು. ಧರ್ಮಣ್ಣ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಏಳರ ಹೊತ್ತಿಗೆ ಪಾಪಣ್ಣ ಏನೂ ಆಗದವನಂತೆ ಎದ್ದು ಕುಳಿತಿದ್ದ! ‘ಸ್ವಲ್ಪ ಹೊಟ್ಟೆ ಉರಿಯುತ್ತಿದೆ. ಅಷ್ಟೆ’ ಎಂದು ಮತ್ತಷ್ಟು ಎಳನೀರು ಮಜ್ಜಿಗೆ ಕುಡಿದು ಒಂದೇ ದಿನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದ!

Saturday, July 11, 2009

ಎಲ್ಲೋರಾ!!! ಎಷ್ಟು ಗೊತ್ತು?


ಈ ಸೃಷ್ಟಿಯ ಮಹಾ ಮಹಾ ಅದ್ಭುತಗಳನ್ನು ನೋಡಿ ಆಶ್ಚರ್ಯ ಪಡುವುದು ಮಾನವನ ಸಹಜಗುಣವೇ ಆಗಿದೆ. ಹಾಗೆಯೇ ಮಾನವ ನಿರ್ಮಿತ ಅದ್ಭುತಗಳೂ ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡುತ್ತವೆ.


ಶ್ರವಣಬೆಳಗೊಳದ ಗೊಮ್ಮಟನ ಎದುರಿಗೆ ನಿಂತಾಗ ಮಾತು ಇಲ್ಲವಾಗಿ ಭವ್ಯತೆಯೇ ಎದ್ದು ಬಂದಂತಾಗುವುದಿಲ್ಲವೇ!? ಅಂತಹ ಮತ್ತೊಂದು ಮಹಾದ್ಭುತವೇ ಎಲ್ಲೋರ ಕೈಲಾಸನಾಥ ದೇವಾಲಯ!


ಇತ್ತೀಚಿಗೆ ಒಂದು ದಿನ ಮಿತ್ರರ ಜೊತೆಯಲ್ಲಿ ಎಲ್ಲೋರಕ್ಕೆ ಭೇಟಿಯಿತ್ತು, ಸುಮಾರು ಒಂಬತ್ತು ಗಂಟೆಗಳ ಕಾಲ ಕೈಲಾಸನಾಥ ದೇವಾಲಯ ಒಂದನ್ನೇ ವೀಕ್ಷಿಸಿದ್ದೆ!.


ಭವ್ಯತೆ, ಭೂಮತೆ, ಮಹೋನ್ನತಿ ಮೊದಲಾದ ಪದಗಳು ಕಲ್ಪನೆಗೆ ನಿಲುಕುವ ಏಕೈಕ ಸ್ಥಳ ಕೈಲಾಸನಾಥ ದೇವಾಲಯ! ಮುನ್ನೂರಕ್ಕೂ ಹೆಚ್ಚು ಫೋಟೋಗಳನ್ನು ಕ್ಲಿಕ್ಕಿಸಿದ ನಾವು, ದೇವಾಲಯದಲ್ಲಿ ಇದ್ದಷ್ಟು ಹೊತ್ತು ಮಾತನಾಡಿದ್ದು ತುಂಬಾ ಕಡಿಮೆ.


ಮಾತನಾಡಬಾರದೆಂದು ನಾವೇನು ಮೊದಲೇ ನಿರ್ಧರಿಸಿರಲಿಲ್ಲ. ಆ ಭವ್ಯ ಕಲಾದೇಗುಲವನ್ನು ಹಾಗೂ ಅದರ ನಿರ್ಮಿತಿಯ ಹಿಂದಿರುವ ಕಲಾವಂತ ಮನಸ್ಸುಗಳನ್ನು ಹಾಗೂ ಶತಮಾನಗಳ ಕಾಲ ದುಡಿದವರ ಶ್ರಮವನ್ನು ಕಂಡು ಮಾತೇ ಮರೆತು ಹೋಗಿತ್ತು!


ಬೆಟ್ಟದ ಮೇಲೆ ಒಂದೇ ಜಾಗದಲ್ಲಿ, ಬಿಸಿಲನ್ನೂ ಲೆಕ್ಕಿಸದೆ ಸುಮಾರು ಹೊತ್ತು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ದೇವಾಲಯವನ್ನು ನೋಡಿ ಆನಂದಿಸುತ್ತಿದ್ದ ವಿದೇಶಿ ಪ್ರವಾಸಿಗನೊಬ್ಬನನ್ನು ‘ದೇವಾಲಯ ನೋಡಿ ಏನನ್ನಿಸಿತು?’ ಎಂದು ಕೇಳಿದಾಗ ಆತ ಹೇಳಿದ್ದು ಒಂದೇ ವಾಕ್ಯ! ‘ನಾನು ನನ್ನ ಮಾತುಗಳನ್ನು ಕಳೆದುಕೊಂಡಿದ್ದೇನೆ!’ ಎಂದು.


ಈಗಿನ ಮಹಾರಾಷ್ಟ್ರ ರಾಜ್ಯದ ಔರಂಗಬಾದ್ ಜಿಲ್ಲೆಯ ಎಲ್ಲೋರಾದಲ್ಲಿ ೩೪ ಮಾನವ ನಿರ್ಮಿತ ಗುಹೆಗಳ ಸಮುಚ್ಚಯವಿದೆ. ಚರಣಾದ್ರಿ ಪರ್ವತಸಾಲಿನಲ್ಲಿರುವ ಈ ಗುಹೆಗಳಲ್ಲಿ ಅತ್ಯಂತ ಬೃಹತ್ತಾದುದ್ದು ಮತ್ತು ಮಹತ್ತಾದುದ್ದು ೧೬ನೆಯದಾದ ಕೈಲಾಸನಾಥ ದೇವಾಲಯ.


ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ದೊರೆಗಳ ಮಹೋನ್ನತ ಕೊಡುಗೆಯಿದು. ಇದರ ನಿರ್ಮಾಣ ಕಾಲ ಏಳರಿಂದ ಹತ್ತನೇ ಶತಮಾನದ ಸುಮಾರು ಮುನ್ನೂರಕ್ಕೂ ಅಧಿಕ ವರ್ಷಗಳು! ರಾಷ್ಟ್ರಕೂಟ ದೊರೆ, ಕನ್ನಡಿಗ ಮೂರನೇ ಕೃಷ್ಣನ ಕಾಲದಲ್ಲಿ ಅದರ ನಿರ್ಮಾಣ ಪೂರ್ಣವಾಯಿತೆಂದು ಊಹಿಸಲಾಗಿದೆ.


ಈಗ ಈ ದೇವಾಲಯ ಯುನೆಸ್ಕೊ ಗುರುತಿಸಿರುವ ವಿಶ್ವಪರಂಪರೆಯ ತಾಣವಾಗಿದೆ.


ಇದು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಏಕಶಿಲಾ ದೇವಾಲಯ. ಕಳಶದಿಂದ ಹಿಡಿದು ಇಡೀ ದೇವಾಲಯ, ಗರ್ಭಗುಡಿ, ಸಭಾಮಂಟಪ, ಕೈಲಾಸನಾಥ ಲಿಂಗ, ಬೃಹತ್‌ಗಾತ್ರದ ಆನೆಗಳು, ವಿಜಯಸ್ಥಂಭಗಳು, ಮುಖ್ಯದೇವಾಲಯದ ಎಡ ಬಲ ಹಾಗೂ ಹಿಂಬದಿಯಲ್ಲಿರುವ ಸಾವಿರಾರು ಅಡಿ ವಿಸ್ತೀರ್ಣದ ವಿಶಾಲ ಸಭಾಮಂಟಪಗಳು, ನೂರಾರು ಕಂಬಗಳು ಎಲ್ಲವೂ ಒಂದೇ ಕಲ್ಲಿನಲ್ಲಿ ರಚಿತವಾಗಿವೆ.


ಒಟ್ಟು ಶಿಲಾಪರ್ವತದ ಸುಮಾರು ೮೧ ಮೀಟರ್ ಉದ್ದ, ೪೭ ಮೀಟರ್ ಅಗಲ ಹಾಗೂ ೩೩ ಮೀಟರ್ ಎತ್ತರದ ಜಾಗದಲ್ಲಿ ದೇವಾಲಯವನ್ನು ಮೇಲಿನಿಂದ ಕೆಳಗೆ ಕೆತ್ತುತ್ತಾ ನಿರ್ಮಿಸಿಲಾಗಿದೆ.


ಮೇಲ್ಭಾಗದಲ್ಲಿ ಬಿಡಿಸಿರುವ ಒಂದು ಕಮಲದ ಹೂವಿನ ಮೇಲೆ ನಾಲ್ಕು ಸಿಂಹಗಳನ್ನು ಕೆತ್ತರಲಾಗಿದೆ.


ಈ ನಾಲ್ಕು ಸಿಂಹಗಳನ್ನು ಸ್ಥಳಾಂತರಿಸಿದರೆ, ಆ ಕಮಲದ ಹೂವಿನ ನಡುವೆ ಒಂದು ದೊಡ್ಡ ಹೆಲಿಕಾಪ್ಟರನ್ನು ಸರಾಗವಾಗಿ ಇಳಿಸಬಹುದಾದಷ್ಟು ದೊಡ್ಡದಾದ ಕಮಲದ ಹೂವನ್ನು ವರ್ಣನೆಯಿಂದಾಗಲೀ, ವಿವರಣೆಯಿಂದಾಗಲೀ ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲಾಗಿವುದಿಲ್ಲ!


ಬೃಹತ್ ಗಾತ್ರದ ನೂರಾರು ಆನೆಗಳು ಇಡೀ ದೇವಾಲಯವನ್ನು ಹೊತ್ತು ನಿಂತಿರುವಂತೆ ನಿರ್ಮಾಣ ಮಾಡಲಾಗಿದೆ.


ಒಂದು ಅಂದಾಜಿನ ಪ್ರಕಾರ ಈ ದೇವಾಲಯವನ್ನು ಕಂಡರಿಸುವುದಕ್ಕೆ ಬೆಟ್ಟದಿಂದ ಹೊರ ತೆಗೆದಿರುವ ಕಲ್ಲು ಎರಡು ಲಕ್ಷ ಟನ್‌ಗಳಿಗಿಂತಲೂ ಹೆಚ್ಚು!


ಗಂಗಾ, ಯಮುನ, ಸರಸ್ವತಿ, ಗಣಪತಿ, ಶಿವನ ವಿವಿಧ ಸ್ವರೂಪಗಳು, ವಿಷ್ಣುವಿನ ದಶಾವತಾರ ಸ್ವರೂಪಗಳು, ದುರ್ಗಾ, ಸಪ್ತಮಾತೃಕೆಯರು ಮೊದಲಾದ ಬೃಹತ್‌ಗಾತ್ರದ ದೇವತಾ ಮೂರ್ತಿಗಳು ಭಿತ್ತಿಯಲ್ಲಿವೆ.


ಗಜಾಸುರಮರ್ಧನ ಶಿವನ ಮೂರ್ತಿ ಹಾಗೂ ರಾವಣ ಕೈಲಾಸ ಪರ್ವತವನ್ನು ಎತ್ತುತ್ತಿರುವ ಶಿಲ್ಪಗಳಂತೂ ಗೊಮ್ಮಟ ಸದೃಶ್ಯವಾಗಿವೆ. ದೇವಾಲಯದ ಭವ್ಯತೆಯನ್ನು ಪುಟಗಟ್ಟಲೆ ವಿವರಣೆಯಿಂದಲೂ ಕಟ್ಟಿಕೊಡಲಾಗುವುದಿಲ್ಲ.


ಜೀವನದಲ್ಲಿ ಒಮ್ಮೆಯಾದರೂ ನೋಡಿ ಆನಂದಿಸಬೇಕಾದ ಕಲಾಕೃತಿ ಎಂದಷ್ಟೇ ಹೇಳಬಹುದು. ಪ್ರತಿಯೊಬ್ಬ ಕನ್ನಡಿಗನೂ ಒಮ್ಮೆಯಾದರೂ ಹೋಗಿ, ಕನ್ನಡಿಗ ದೊರೆಗಳ ಆ ಮಹೋನ್ನತ ಕೊಡುಗೆಯನ್ನು ಕಂಡು ಧನ್ಯರಾಗಬೇಕು ಎಂಬುದಷ್ಟೇ ನನ್ನ ಅಭೀಪ್ಸೆ! ಏಕೆಂದರೆ, ಅದೊಂದು ಕಲ್ಲಿನಲ್ಲಿ ಕಡೆದಿಟ್ಟ ಮಹಾಕಾವ್ಯ.


ರಾಮಾಯಣ ಮಹಾಭಾರತಗಳು ಈ ಶಿಲ್ಪಕಾವ್ಯದ ಮುಂದೆ ಕುಬ್ಜವಾಗಿ ಕಂಡರೆ ಖಂಡಿತ ಅದು ನಿಮ್ಮ ದೃಷ್ಟಿ ದೋಷವಲ್ಲ.


ಹಲವಾರು ಕೋನಗಳಿಂದ ದೇವಾಲಯವನ್ನು ಕ್ಲಿಕ್ಕಿಸುವುದು ಹಾಗೂ ದೇವಾಲಯದ ಒಳಗೆ ಮತ್ತು ಹೊರಗೆ ನಿರ್ಮಿಸಿರುವ ಅದ್ಭುತವಾದ ಶಿಲ್ಪಗಳನ್ನು ಕೆಮಾರದಲ್ಲಿ ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು.


ಹೀಗೆ ವಿಶೇಷವಾಗಿ ಸೆರೆಹಿಡಿದ ಕೈಲಾಸನಾಥ ದೇವಾಲಯದ ವಾಸ್ತು-ಶಿಲ್ಪ ಸೌಂದರ್ಯವನ್ನು ಆಯ್ದ ಚಿತ್ರಗಳ ಮೂಲಕ ಪರಿಚಯಿಸುವ ಇರಾದೆ ನನ್ನದಾಗಿತ್ತು.

Monday, July 06, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 19

ಚೌತಿ ಚಂದ್ರ ಮತ್ತು ಕಳ್ಳತನದ ಆರೋಪ
ಗಣೇಶ ಚೌತಿಯ ದಿನ ಚಂದ್ರನನ್ನು ನೋಡಿದರೆ, ನೋಡಿದವರ ಮೇಲೆ ವೃಥಾ ಕಳ್ಳತನದ ಆರೋಪಗಳು ಬರುತ್ತವೆ, ಅವರಿಗೆ ಕಷ್ಟಗಳು ಎದುರಾಗುತ್ತವೆ ಎಂಬೆಲ್ಲಾ ನಂಬಿಕೆಗಳು ಇಂದಿಗೂ ಜನಮಾನಸದಲ್ಲಿ ಇವೆ. ಸ್ವತಃ ಕೃಷ್ಣನೇ ಚೌತಿ ಚಂದ್ರನನ್ನು ನೋಡಿ ಶಮಂತಕ ಮಣಿ ಕದ್ದನೆಂದು ಆರೋಪಕ್ಕೆ ಗುರಿಯಾದ ಕಥೆಗಳನ್ನು ನಾವು ಬಾಲ್ಯದಲ್ಲಿ ಕೇಳಿದ್ದೆವು. ಆದರೆ, ಯಾರ ಭಯವೂ ಇಲ್ಲದೆ, ಅತಿಯಾದ ಹುಡುಗಾಟದಲ್ಲಿ ತೊಡಗಿದ್ದ ನಮಗೆ ಕಳ್ಳತನದ ಆರೋಪ ಹೊರುವ ಭಯವೇ ಇರಲಿಲ್ಲ! ಹೀಗಾಗಿ ಉದ್ದೇಶಪೂರ್ವಕವಾಗಿಯೇ ಪ್ರತಿವರ್ಷವೂ ಚೌತಿಚಂದ್ರನನ್ನು ನೋಡಿ, ನಾವೇನೋ ಕ್ರಾಂತಿ ಮಾಡುತ್ತಿದ್ದೇವೆ ಎಂದು ಖುಷಿಪಡುವ ಸ್ವಭಾವೂ ನಮ್ಮಲ್ಲಿ ಕೆಲವರಿಗಿತ್ತು.
ನಾವು ಎಂಟನೇ ತರಗತಿಯಲ್ಲಿದ್ದಾಗ ಗೌರಿ-ಗಣೇಶ ಹಬ್ಬದ ದಿನದಂದೇ ನಮ್ಮ ಪ್ರೀತಿಯ ಅಜ್ಜ ನಿಧನರಾಗಿದ್ದುದರಿಂದ, ನಮ್ಮ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಮಾಡುವುದನ್ನು ಬಿಟ್ಟು ಬಿಟ್ಟಿದ್ದೆವು. ಮತ್ತೆ ಯಾವಾಗಲಾದರೂ ಆ ಹಬ್ಬದ ದಿನದಂದೇ ಮನೆಯಲ್ಲಿ ಏನಾದರು ಜನಿಸಿದರೆ, ಅಂದರೆ, ಯಾರಿಗಾದರು ಮಗು ಹುಟ್ಟುವುದು, ಹಸು ಅಥವಾ ಎಮ್ಮೆ ಕರು ಹಾಕುವುದು ಮಾಡಿದರೆ ಹಬ್ಬ ಮಾಡುವುದನ್ನು ಮತ್ತೆ ಪುನರಾರಂಭಿಸಬಹುದೆಂದು ಒಂದು ನಂಬಿಕೆಯಿದೆ. ಈ ನಂಬಿಕೆಯಿಂದಾಗಿ ಸುಮಾರು ಹತ್ತು ವರ್ಷಗಳ ಕಾಲ ನಮ್ಮ ಮತ್ತು ನಮ್ಮಜ್ಜನ ಅಣ್ಣತಮ್ಮಂದಿರ ಮನೆಗಳಲ್ಲೂ ಗೌರಿ-ಗಣೇಶ ಹಬ್ಬವನ್ನು ಮಾಡುತ್ತಿರಲಿಲ್ಲ. ಕೊನೆಗೆ ಒಂದು ವರ್ಷ ಗಣೇಶ ಹಬ್ಬದಂದೇ, ನಮ್ಮ ಚಿಕ್ಕಜ್ಜನ ಮನೆಯಲ್ಲಿ ಹಸುವೊಂದು ಕರು ಹಾಕಿದ್ದರಿಂದ ಹಬ್ಬದ ಆಚರಣೆ ಮತ್ತೆ ಪ್ರಾರಂಭವಾಯಿತು. ಈ ಕಾರಣದಿಂದಾಗಿ, ನಾನು ಹಾಸ್ಟೆಲ್ಲಿನಲ್ಲಿದ್ದಾಗ, ಗೌರಿ-ಗಣೇಶ ಹಬ್ಬಗಳಿಗೆ ರಜವಿದ್ದರೂ ಊರಿಗೆ ಹೋಗುತ್ತಿರಲಿಲ್ಲ.
ಆದರೆ ಬಹುತೇಕ ಹುಡುಗರು ಊರಿಗೆ ಹೋಗಿ ಬರುತ್ತಿದ್ದರಲ್ಲ, ಅವರೆಲ್ಲಾ ಅವರವರ ಮನೆಯಲ್ಲಿ ಮಾಡಿದ ತಿಂಡಿಗಳನ್ನು ತಂದಿರುತ್ತಿದ್ದರು. ಕೆಲವರು ನಮಗೆ ತಾವಾಗಿಯೆ ಕೊಡುತ್ತಿದ್ದರು. ಆದರೂ ‘ಕದ್ದು ತಿನ್ನುವ ಬೆಲ್ಲಕ್ಕೆ ರುಚಿ ಜಾಸ್ತಿ’ ಎನ್ನುವ ಹಾಗೆ, ನಾವೆಲ್ಲಾ ಊರಿಗೆ ಹೋಗಿ ಬಂದವರ ಪೆಟ್ಟಿಗೆಳನ್ನು ಯಾರಿಗೂ ತಿಳಿಯದಂತೆ ತೆಗೆದು ತಿಂಡಿ ಮಾತ್ರ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೆವು. ಈ ರೀತಿಯ ಕಳ್ಳತನವನ್ನು ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಾತ್ರ ಮಾಡುತ್ತಿದ್ದರು. ಪರಂಪರೆಯಂತೆ ಆ ವರ್ಷವೂ ನಾವು ಮುಂದುವರೆಸಿದ್ದೆವು. ಐದಾರು ಹುಡುಗರ ಪೆಟ್ಟಿಗೆಗಳ ಬೀಗಗಳನ್ನು ಹೇಗೋ ತೆಗೆದು ತಿಂಡಿಯನ್ನು ಕದ್ದು ಮಜಾ ಉಡಾಯಿಸಿದ್ದೆವು. ಆದರೆ ಒಂದೆರಡು ದಿನಗಳಲ್ಲಿ ಒಂಬತ್ತನೇ ತರಗತಿಯ ‘ಹೇಮಂತ ಎನ್ನುವ ಹುಡುಗನ ಪೆಟ್ಟಿಗೆಯಲ್ಲಿ ಐವತ್ತು ರೂಪಾಯಿ ಕಳ್ಳತನವಾಗಿದೆ’ ಎಂಬ ಸುದ್ದಿ ಹರಡಿಬಿಟ್ಟಿತ್ತು. ನಾವು ತಿಂಡಿಯನ್ನು ಸೂರೆ ಹೊಡೆದ ಪೆಟ್ಟಿಗೆಯಲ್ಲಿ ಅವನದೂ ಒಂದಾಗಿತ್ತು. ಅದರಲ್ಲಿ ತುಂಬಾ ಬೇಯಿಸಿದ ಕಡಲೆಕಾಯಿಗಳಿದ್ದು, ಅವನ್ನು ಒಂದೂ ಬಿಡದಂತೆ ನಾವು ತಿಂದು ಹಾಕಿದ್ದೆವು. ನಾವು ಹಾಗೆ ತಿಂದದ್ದಕ್ಕೆ ನಮ್ಮನ್ನು ಹೆದರಿಸಲು ಹಾಗೆ ಸುದ್ದಿ ಹಬ್ಬಿಸಿರಬಹುದೆಂದು ನಾವು ಅಂದುಕೊಂಡಿದ್ದೆವು.
ನಮ್ಮ ಈ ಕಳ್ಳಕೂಟದಲ್ಲಿ ಒಂಬತ್ತನೇ ತರಗತಿಯಲ್ಲಿದ್ದ ಶಿವೇಗೌಡ ಎಂಬ ಮಹಾನ್ ಕುಳ್ಳನೂ ಇದ್ದ! ಈತ ಈಗ ಹಲವಾರು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಕೇವಲ ಮೂರು ಅಡಿ ಎತ್ತರವಿದ್ದ ಆತನನ್ನು ಯಾರು ಬೇಕಾದರೂ ಎತ್ತಿ ಕೊಂಡೊಯ್ಯಬಹುದಾಗಿತ್ತು. ನಾವು ಆತನನ್ನು ಚಿಕ್ಕ ಹುಡುಗನೆಂದೋ, ಅಥವಾ ಕಡ್ಲೆಕಾಯಿಯ ಮೇಲೆ ನಮಗಿದ್ದ ದುರಾಸೆಯಿಂದಲೋ ಅವನಿಗೆ ತುಂಬಾ ಕಡಿಮೆ ಕಡ್ಲೆಕಾಯಿಗಳನ್ನು ಕೊಟ್ಟಿದ್ದೆವು. ಆ ಹೊಟ್ಟೆಉರಿಯಿಂದ ಆತ, ನಾವು ಪೆಟ್ಟಿಗೆ ಬೀಗ ತೆಗೆದಿದ್ದನ್ನು ಹೇಮಂತನಿಗೆ ತಿಳಿಸಿಬಿಟ್ಟಿದ್ದ. ನಾವೇ ತೆಗೆದಿದ್ದೆಂದು ತಿಳಿದ ತಕ್ಷಣ ಆ ಹುಡುಗ ನೇರವಾಗಿ ವಾರ್ಡನ್‌ಗೇ ದೂರು ಕೊಟ್ಟುಬಿಟ್ಟ. ಶುರುವಾಯಿತು ನೋಡಿ, ವಿಚಾರಣೆ!
ಜಟಗೊಂಡ ಅವರು ಕೈಯಲ್ಲಿ ದೊಣ್ಣೆ ಹಿಡಿದು ನಮ್ಮನ್ನು ಪ್ರಶ್ನಿಸುತ್ತಿದ್ದರು. ನಾವೇನು ಸುಳ್ಳು ಹೇಳಲಿಲ್ಲ. ‘ಕೇವಲ ತಿಂಡಿ ಆಸೆಗಾಗಿ ಪೆಟ್ಟಿಗೆಗಳನ್ನು ತೆಗೆದಿದ್ದು, ಕೇವಲ ತಿಂಡಿಯನ್ನು ಮಾತ್ರವೇ ತಿಂದಿದ್ದೇವೆ ದುಡ್ಡನ್ನು ನಾವು ಕದ್ದಿಲ್ಲ’ ಎಂದು ನಿಜವನ್ನೇ ಹೇಳಿದ್ದೆವು. ‘ಮೊನ್ನೆ ನಾವು ಚೌತಿ ಚಂದ್ರನನ್ನು ನೋಡಿದ್ದರಿಂದ, ಇಂದು ನಮ್ಮ ಮೇಲೆ ವೃಥಾ ಆರೋಪ ಬಂದಿದೆ. ನಾವು ಕದ್ದಿಲ್ಲ’ ಎಂಬುದು ನಮ್ಮ ವಾದವಾಗಿತ್ತು. ನಾವು ಕಳ್ಳರಲ್ಲ ಎಂಬುದು ವಾರ್ಡನ್‌ಗೂ, ಹೇಮಂತನಿಗೂ ಗೊತ್ತಿತ್ತು. ಆದರೆ ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯಿತು ಅನ್ನುತ್ತಾರಲ್ಲ ಹಾಗಾಯಿತು. ಯಾವುದೂ ಇತ್ಯರ್ಥವಾಗದೆ, ವಾರ್ಡನ್ ವಿಚಾರಣೆಯನ್ನು ಒಂದು ದಿನಕ್ಕೆ ಮುಂದೂಡಿದರು. ಹಾಗೆ ಒಂದು ದಿನ ಮುಂದೂಡಲು ನಮಗೆ ಒಂದು ಬಲವಾದ ಕಾರಣ ಸಿಕ್ಕಿತ್ತು. ಹೇಮಂತ ತನ್ನ ಐವತ್ತು ರೂಪಾಯಿ ನೋಟಿನ ಮೇಲೆ ಗಣಪತಿಯ ಚಿತ್ರ ಬರೆದಿದ್ದಾಗಿ ಹೇಳಿದ್ದ. ಅದನ್ನೇ ಮುಂದು ಮಾಡಿಕೊಂಡು, ಹುಡುಗರೆಲ್ಲರ ಪೆಟ್ಟಿಗೆಯನ್ನು ಶೋಧಿಸುವುದು ಹಾಗೂ ಛೇರ್ಮನ್ನರ ಅಂಗಡಿ ಮತ್ತು ಮಂಜಣ್ಣನ ಹೋಟೆಲ್ಲಿನಲ್ಲಿ ಅಂಥ ನೋಟೇನಾದರು ಬಂದಿತ್ತೆ ಎಂದು ಕೇಳುವುದು ಎಂಬ ತೀರ್ಮಾನವನ್ನು ವಾರ್ಡನ್ ಪ್ರಕಟಿಸಿದ್ದರು.
ಮರುದಿನ ಇನ್ನೂ ಹುಡುಗರ ಪೆಟ್ಟಿಗೆಗಳನ್ನು ಶೋಧಿಸುವ ಮುನ್ನವೇ, ಹೇಮಂತನ ಪೆಟ್ಟಿಗೆಯ ಕೆಳಗೇ ಆ ನೋಟು ಸಿಕ್ಕಬೇಕೆ! ಪೆಟ್ಟಿಗೆ ಚೆಕ್ ಮಾಡುತ್ತಾರೆಂಬ ಭಯಕ್ಕೆ ಕಳ್ಳ ಅಲ್ಲಿ ಹಾಕಿದ್ದಿರಬಹುದು ಎಂಬ ಅನುಮಾನ ಆಗ ಎಲ್ಲರಿಗೂ ಬಂದಿತ್ತು. ಆದರೆ ಹೇಮಂತ ‘ಸಾರ್ ನಾನು ಊರಿನಿಂದ ಬಂದ ಮೇಲೆ ಪೆಟ್ಟಿಗೆ ಎಲ್ಲವನ್ನೂ ಕ್ಲೀನ್ ಮಾಡಿ ಜೋಡಿಸುವ ಭರದಲ್ಲಿ ಅದು ಕೆಳಗೆ ಬಿದ್ದಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಆ ವಿಷಯ ಅಲ್ಲಿಗೆ ಮುಕ್ತಾಯವಾಗಿತ್ತು. ಆದರೆ, ನಾವು ಚೌತಿ ಚಂದ್ರನನ್ನು ನೋಡಿದ್ದರಿಂದಲೇ ನಮ್ಮ ಮೇಲೆ ಕಳ್ಳತನದ ಆರೋಪ ಬಂದಿತ್ತು ಎಂಬುದು ಮಾತ್ರ ಅವತ್ತಿಗೆ ಹಾಸ್ಟೆಲ್ಲಿನ ಹಾಗೂ ಸ್ಕೂಲಿನ ಹುಡುಗರ ನಡುವೆ ಯಾವುದೇ ಅನುಮಾನಕ್ಕೆ ಎಡೆಗೊಡದ ಸತ್ಯವಾಗಿತ್ತು!
ಆ ವಿಷಯ ಅಲ್ಲಿಗೆ ಮುಗಿಯಿತು ಎಂದರೆ ತಪ್ಪಾಗುತ್ತದೆ. ಏಕೆಂದರೆ ತಿಂಡಿಕಳ್ಳರಾಗಿದ್ದ ನಮ್ಮ ಗುಂಪಿನ ಐದು ಜನರನ್ನು ವಾರ್ಡನ್ ಕರೆದು, ಬುದ್ಧಿವಾದವನ್ನು ಹೇಳಿದರು. ಆದರೆ ನಮ್ಮ ಜೊತೆಯೇ ಇದ್ದು ಕದ್ದ ತಿಂಡಿ ತಿಂದದ್ದೂ ಅಲ್ಲದೆ, ನಮ್ಮ ಮೇಲೆಯೇ ಚಾಡಿ ಹೇಳಿದ ಕುಳ್ಳ ಶಿವನನ್ನು ಅವರು ಏನೂ ಅನ್ನಲಿಲ್ಲ. ಮೊದಲಿಗೇ ಆತನ ಮೇಲೆ ನಮಗೆ ಸಿಟ್ಟಿತ್ತು. ಈಗ ನಾವು ಕಳ್ಳರಲ್ಲ ಎಂದು ತೀರ್ಮಾನವಾದೊಡನೆ ನಾನು ಮತ್ತು ಇನ್ನೊಬ್ಬ ಸೋಮಶೇಖರ ಎಂಬುವವನು ಸೇರಿಕೊಂಡು, ಕುಳ್ಳ ಶಿವನನ್ನು ಕುಯ್ಯೋ ಮರ್ರೋ ಎನ್ನುವಂತೆ ಹೊಡೆದುಬಿಟ್ಟೆವು. ‘ವಿಶ್ವಾಸ ದ್ರೋಹಿ’, ‘ಮಿತ್ರದ್ರೋಹಿ’ ಎಂದೆಲ್ಲಾ ಆತನನ್ನು ಹೀಯಾಳಿಸಿ, ‘ನಾವು ಹೊಡೆದಿದ್ದನ್ನು ವಾರ್ಡನ್‌ಗೆ ಏನಾದರು ಹೇಳಿದರೆ, ರಾತ್ರಿ ವೇಳೆ ಹಾಸಿಗೆ ಸಮೇತ ಹೊತ್ತುಕೊಂಡು ಹೋಗಿ ಭೂತಯ್ಯನ ಗುಡಿಯ ಬಳಿ ಮಲಗಿಸಿ ಬರುತ್ತೇವೆ’ ಎಂದು ಹೆದರಿಸಿದೆವು.
ಕುಂದೂರುಮಠದ ರಕ್ಷಕ ದೇವರೆಂದು ಭೂತಯ್ಯನನ್ನು ಒಂದು ಕಲ್ಲು ಗುಂಡಿನ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಅದಕ್ಕೊಂದು ಪುಟ್ಟ ಗುಡಿಯೂ ಇತ್ತು. ಅಲ್ಲಿಗೆ ಹೋಗಲು ಹುಡುಗರು ತುಂಬಾ ಹೆದರುತ್ತಿದ್ದರು. ಅಲ್ಲದೆ ಆಗಾಗ ನಾವು ತಮಾಷೆಗಾಗಿ, ಎಲ್ಲರಿಗಿಂತ ಮೊದಲು ಮಲಗಿ ನಿದ್ದೆ ಮಾಡುತ್ತಿದ್ದ ಕೆಲವರನ್ನು ಹಾಸಿಗೆ ಸಮೇತ ಎತ್ತಿಕೊಂಡು ಹೋಗಿ ಹೊರಗೆ ಮಲಗಿಸಿ, ಆಗಲೂ ಅವರೂ ಎಚ್ಚರಗೊಳ್ಳದಿದ್ದಲ್ಲಿ ಮತ್ತೆ ಎತ್ತಿ ತಂದು ಒಳಗೆ ಮಲಗಿಸಿದ ಉದಾಹರಣೆಗಳಿದ್ದವು. ಭೂತಯ್ಯನ ಗುಡಿಯ ಬಳಿಗೆ ಯಾರನ್ನೂ ಹೊತ್ತುಕೊಂಡು ಹೋಗುವ ಧೈರ್ಯ ನಮಗೂ ಇರಲಿಲ್ಲ. ಆದರೂ ಪುಕ್ಕಲನಾಗಿದ್ದ ಶಿವೇಗೌಡ ನಾವು ಆತನಿಗೆ ಹೊಡೆದಿದ್ದನ್ನು ವಾರ್ಡನ್ ಬಳಿ ಹೇಳುವ ಸಾಹಸಕ್ಕೆ ಕೈಹಾಕಲಿಲ್ಲ.

Friday, July 03, 2009

ಅಂತರಂಗದ ಅರಿವು


1
ದಟ್ಟವಾದ ಕಾಡಿನಲ್ಲಿ
ಪ್ರಾಣಿ ಪಕ್ಷಿ ಗೆಳೆಯರೆಲ್ಲ
ಸಭೆಯ ಸೇರಿಕೊಂಡು ಮಾತನಾಡುತ್ತಿದ್ದವು
ಕರಡಿ ಜಿಂಕೆ ಕೋಗಿಲೆ ಮೊಲ
ಕೋತಿ ಸಿಂಹ ಆನೆ ಹುಲಿಯು
ರೂಪವೆಂದರೇನು ಎಂದು ಹರಟುತ್ತಿದ್ದವು
2
ಯಾರು ಚೆಂದ ಯಾರು ಅಂದ
ಎಂಬ ಮಾತು ಬಂದು ನಾನು
ತಾನು ಎಂದು ಕೋಗಿ ಜಗಳವಾಡಿಕೊಂಡವು
ಆನೆ ಮರವನೆತ್ತಿ ಹುಲಿಯು
ಮರವನೇರಿ ಸಿಂಹ ನೆಗೆದು
ಕರಡಿ ಕುಣಿದು ಜಿಂಕೆ ಓಡಿ ಬರಿದೆ ಮೆರೆದವು
3
ಓಡಿ ಬಂದ ಚಿರತೆ ಗುಡುಗಿ
ನೋಡಿರೊಮ್ಮೆ ನನ್ನ ಓಟ
ನನ್ನ ಮುಂದೆ ನೀವು ಬರಿದೆ ಸೊನ್ನೆ ಎಂದಿತು
ಪಟ್ಟೆ ಹುಲಿ ನೆಗೆದು ನೆಗೆದು
ನೋಡಿರೊಮ್ಮೆ ನನ್ನ ಮೈಯ
ಮಾಟ ಆಗ ಹೇಳಿ ಯಾರು ಚೆಂದ ಎಂದಿತು
4
ಆನೆ ಬಂದು ಮರವನೆತ್ತಿ
ನೋಡಿರಿಲ್ಲಿ ನನ್ನ ಶಕ್ತಿ
ನನ್ನ ಮುಂದೆ ಯಾರು ಇಲ್ಲ ಎಂದು ಬೀಗಿತು
ಆನೆ ನಿನ್ನ ನಾನು ಎಷ್ಟು
ಬಾರಿ ಸೋಲಿಸಿಲ್ಲ ಎಂದು
ಸಿಂಹ ಗುಡುಗಿ ಪಂಜವೆತ್ತಿ ಹಲ್ಲು ಕಡಿಯಿತು
5
ಕೂಹು ಕೂಹು ಎಂದು ಕೋಕಿ-
ಲೊಂದು ಹಾಡಿ ನಾನೆ ಚೆಂದ
ನನ್ನ ದನಿಯು ಚೆಂದ ಎಂದು ಜಂಭವಾಡಿತು
ಮೋಟುಬಾಲ ಕುಣಿಸಿ ಮೊಲವು
ಕರಿಯ ಬಣ್ಣ ನಿಂದು ನೋಡು
ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು
6
ಕಾಡಿನಲ್ಲಿ ಹೀಗೆ ಯುದ್ಧ
ನಡೆಯೆ ನಿದ್ದೆಗೆಟ್ಟ ದೇವ
ಜಾಣ ಶಾರದೆಯನು ಕರೆದು ಆಜ್ಞೆಯಿತ್ತನು
ದೇವಿ ನೀನು ಏನೆ ಮಾಡು
ನಿನ್ನ ನವಿಲು ಅದನೆ ಕಳಿಸು
ಜಗಳವೊಮ್ಮೆ ನಿಂತರಷ್ಟೆ ಸಾಕು ಎಂದನು
7
ಕಾಡಿನಲ್ಲಿ ಇಳಿದ ನವಿಲು
ಜಗಳವೇಕೆ ನಿಮ್ಮಲೆಂದು
ಗರಿಯ ಬಿಚ್ಚಿ ಬಿಂಕದಿಂದ ನಾಟ್ಯವಾಡಿತು
ನಿಮ್ಮ ಮನಸು ಶುದ್ಧವಿರಲು
ಜಗದಿ ನೀವೆ ರೂಪವಂತ-
ರೆಂದು ಹೇಳಿ ನವಿಲು ಜಂಭ ಬೇಡವೆಂದಿತು
8
ಕಣ್ಣು ಬರಿದೆ ರೂಪವನ್ನು
ಕಂಡರಷ್ಟೆ ಸಾಲದಣ್ಣ
ಅರಿಯಬೇಕು ಅಂತರಂಗ ಮರೆಯಬೇಡಿರಿ
ಎಲ್ಲರಲ್ಲು ದೇವನಿಹನು
ಎಲ್ಲರಲ್ಲು ರೂಪವಿಹುದು
ಕಾಣುವಂತ ಕಣ್ಣು ಬೇಕು ತಿಳಿದುಕೊಳ್ಳಿರಿ