Tuesday, May 06, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 1

ಹಿಂದಿನ ಸಂಚಿಕೆ : ಯಾರೀ 'ಅನಲಾ'!?

ಗಾನಮಲ್ತು; ಅನುರೋಧನಂ! .....
ಸುಗ್ರೀವನ ಆಜ್ಞೆಯನ್ನು ಹೊತ್ತು, ರಾಮನಿತ್ತ ಮುದ್ರಿಕೆಯನ್ನು ಆಂತು, ಸಾಗರವನ್ನು ಉಲ್ಲಂಘಿಸಿ, ಸೀತಾನ್ವೇಷಣೆಗಾಗಿ ಲಂಕೆಗೆ ಬಂದಿಳಿದ ಆಂಜನೇಯನಿಗೆ, ‘ಸಂಸ್ಕೃತಿ ಲಂಕಾ’ ಅಚ್ಚರಿಯ ಕಡಲಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೀತೆಯನ್ನು ಹುಡುಕುತ್ತಾ ಲಂಕೆಯ ಪ್ರಮುಖ ಮನೆಗಳೆಲ್ಲವನ್ನೂ ಶೋಧಿಸುತ್ತಾ ಬರುತ್ತಾನೆ. ಅರಮನೆಯಲ್ಲಿ ರಾವಣನೊಂದಿಗೆ ಇದ್ದ ಮಂಡೋದರಿಯನ್ನೇ ಸೀತೆಯೆಂದು ಭಾವಿಸುತ್ತಾನೆ, ಕೊನೆಗೆ ನಿಜವನ್ನರಿಯುತ್ತಾನೆ. ಅಲ್ಲಿಂದ ಮುಂದೆ ಬಂದವನಿಗೆ ಕಂಡದ್ದು ರಾವಣನ ಮಗ ಇಂದ್ರಜಿತು ಮತ್ತವನ ಸಂಸಾರ. ಧೂಮರೂಪವನ್ನು ತಳೆದು ಸಂಚರಿಸುತ್ತಿದ್ದ ಆಂಜನೇಯನ ಕಾರಣದಿಂದ ದಟ್ಟಯಿಸಿದ ಹೊಗೆಗೆ ತೂಗುತೊಟ್ಟಿಲಿನಲ್ಲಿ ಅಳಲಾರಂಭಿಸಿದ ವಜ್ರಾರಿಯನ್ನು ಆತನ ತಾಯಿ ತಾರಾಕ್ಷಿ ಸಂತಯಿಸುತ್ತಿದ್ದಾಳೆ. ಅವಳಿಗೆ ಅದೊಂದು ಅಪಶಕುನದಂತೆ ಭಾಸವಾಗಿದೆ. ಇಂದ್ರಜಿತು ಅವಳಿಗೆ ನೆರವಾಗುತ್ತಾ, ತನ್ನ ಕಂದನ ಅಳು ಹಾಗೂ ಹೆಂಡತಿಯ ಭಯಕ್ಕೆ ಸ್ಪಂದಿಸುತ್ತಿದ್ದಾನೆ. ಆವರಿಸಿರವ ದಟ್ಟ ಹೊಗೆಯನ್ನು ಗಮನಿಸಿದ ಆತ, "ಏನಿದು? ಧೂಫಧೂಮಮೇಂ? ಇಂತು ಪೊಗೆ ಅಡಸಿದೊಡೆ ನಿದ್ದೆ ಅಚ್ಚರಿಯಲ್ತೆ ಕಂದಂಗೆ?" ಎಂದು ಚಾರರಿಗೆ ಗವಾಕ್ಷಗಳನ್ನು ತೆರೆಯಲು ಆದೇಶಿಸುತ್ತಾನೆ. ಅದು ಅಪಶಕುನದಂತೆ ಕಂಡುದೇಕೆಂದು ತಾರಾಕ್ಷಿ ಹೇಳುತ್ತಾಳೆ.
ಪೋದ ಬೈಗಿನೊಳು,
ಪತ್ತನದ ಉತ್ತರದ ಗಿರಿಯ ಲಂಬವೆಂಬಾ ಶಿಖರದತ್ತಣ್ಗೆ
ಬಿದ್ದುದು ಒಂದು ಮಹೋಲ್ಕೆ.
ಎಮ್ಮ ಉದ್ಯಾನ ಕೃತಕ ಶೈಲಾಗ್ರದಿಂ ಕಂಡೆನ್
ಆಂ ಅನಲಾಕುಮಾರಿಯೊಡನಿರ್ದು
ಕನಕಲಂಕಾನ್ವೇಷಣೆಯಲ್ಲಿ ಆಂಜನೇಯನೊಂದಿಗಿದ್ದು ಸಂಚರಿಸುತ್ತಿದ್ದ ಸಹೃದಯರಿಗೆ ಮೊದಲ ಬಾರಿಗೆ ಅನಲಾ ಎಂಬ ಹೆಸರು ಎದುರಾಗುತ್ತದೆ. (’ರಾಮಾಯಣದರ್ಶನಂ’ನಲ್ಲಿ ರಾವಣನ ಹೆಸರು ಮೊದಲು ಕೇಳುವುದು ವಿಶ್ವಾಮಿತ್ರನ ಬಾಯಲ್ಲಿ, ಅದೂ ದಶರಥನ ಸಭೆಯಲ್ಲಿ!) ಯಾರು ಈ ಅನಲೆ? ರಾವಣನ ಸೊಸೆ ತಾರಾಕ್ಷಿಯ ಜೊತೆಗಿದ್ದಾಳೆ. ತಾರಾಕ್ಷಿ ಅವಳನ್ನು 'ಅನಲಾಕುಮಾರಿ’ ಎಂದು ಗೌರಪೂರ್ವಕವಾಗಿ ಸಂಬೋಧಿಸುತ್ತಿದ್ದಾಳೆ? ಎಂಬ ಅನುಮಾನಗಳು ಏಳಲು ಶುರುವಾಗುತ್ತವೆ. ಅದಕ್ಕೆ ಮತ್ತೆ ಮುಂದೆ ಇಂದ್ರಜಿತುವಿನ ಮಾತಲ್ಲಿ ಉತ್ತರ ಸಿಗುತ್ತದೆ. ಮಹಾಉಲ್ಕೆ ಬಿದ್ದದ್ದು ಅಪಶಕುನ ಎಂದು ಬಗೆದ ಮಡದಿಯ ಭೀತಿಯನ್ನು ನಿವಾರಿಸಿ, ’ಧನುರ್ವಿದ್ಯೆಯಂ ಪೇಳ್ವ ವೇದಮಂ’ ಓದಲು ಮುಂದಾಗಿದ್ದ ಇಂದ್ರಜಿತುವನ್ನು ತಾರಾಕ್ಷಿ ತಡೆದು,
....ರಾಮಸತಿಯಂ ಮಾವನ್ ಅಪಹರಿಸಿ ತಂದಾ ಮೊದಲ್ಗೊಂಡು
ತೋರುತಿವೆ ದುಶ್ಯಕುನಗಳ್. ನನಗೊ ದುಃಸ್ವಪ್ನಮಯಂ ಇರುಳ್.
ಆ ಮಹಾ ತಾಯಿಯನ್ ಹದಿಬದೆಯರಧಿದೇವಿಯಂ
ಮಾವನೆಂತಕ್ಕೆ ತಂದಾಯ್ತು.
ವಶವಾಗದವಳನ್ ಇನ್ನಾದಡೊಂ ಹಿಂದಕೊಪ್ಪಿಸುವಂತೆ
ತಿದ್ದಬಾರದೆ ನಿಮ್ಮಾ ತಂದೆಯಂ
ಎಂದು ಪ್ರಶ್ನಿಸುತ್ತಾಳೆ. ಸೀತೆಯ ಸಂಕಷ್ಟವನ್ನು ತಾರಾಕ್ಷಿ ಅರ್ಥಮಾಡಿಕೊಳ್ಳಬಲ್ಲಳು. ಆಕೆ ರಾವಣನ ನಿರ್ಧಾರವನ್ನು ತನ್ನ ಗಂಡನ ಮುಂದಾದರೂ ಪ್ರಶ್ನಿಸಬಲ್ಲಳು. ಆದರೆ, ಇಂದ್ರಜಿತು ರಾವಣನ ಮಗ. ಆತನಿಗೆ ತನ್ನ ತಂದೆ ಮಾಡಿದುದೇ ಸರಿ. ಅದಕ್ಕೆ ಆತ ತನ್ನ ಪತ್ನಿಯ ವಿರುದ್ಧ ಸಿಡಿಮಿಡಿಗೊಳ್ಳುತ್ತಾನೆ. ಆ ಸಿಡಿಮಿಡಿಯಲ್ಲೂ ಮುದ್ದಿರುತ್ತದೆ! ತನ್ನ ಪ್ರೀತಿಯ ಮಡದಿ ಇಷ್ಟೊಂದು ಮುಂದುವರೆದು ಯೋಚಿಸಬಲ್ಲಳು ಎಂಬುದೇ ಅವನಿಗೊಂದು ಸೋಜಿಗ. ಆ ಸೋಜಿಗಕ್ಕೆ ಆತ ಕಂಡಕೊಂಡ ಉತ್ತರವೇ 'ಅನಲೆ’! ಅವಳ ಸಹವಾಸದಿಂಲೇ ತಾರಾಕ್ಷಿ ಹೀಗೆಲ್ಲಾ ಯೋಚಿಸಬಲ್ಲವಳಾಗಿದ್ದಾಳೆ ಎಂದು ಭಾವಿಸುತ್ತಾನೆ. "ಆ ತಂಗಿ, ಕಕ್ಕನ ಮಗಳ್, ನಿನಗೆ ಸಖಿಯಲ್ತೆ ಅನಲೆ! ಅವಳ ಉಪದೇಶಮಂ ಕೇಳ್ದು ನೀನುಂ ವಿಭೀಷಣಾರ್ಯನ ತೆರದೊಳು ಒರೆಯುತಿಹೆ ನನಗೆ." ಎನ್ನುತ್ತಾನೆ. ಇಂದ್ರಜಿತುವಿನ ಮಾತಿನಿಂದ ನಮಗೆ ಅನಲೆಯ ಪರಿಚಯ ಸ್ವಲ್ಪಮಟ್ಟಿಗೆ ಲಭ್ಯವಾಗುತ್ತದೆ. ಆಕೆ, ಆತನ ತಂಗಿ. ಚಿಕ್ಕಪ್ಪನ ಮಗಳು. ತಾರಾಕ್ಷಿಯ ಜೊತೆ ಅವಳದು ಉತ್ತಮ ಗೆಳೆತನ. ವಿಭೀಷಣನಂತೆಯೇ ಅವಳು ಧರ್ಮಭೀರು. ಇಂದ್ರಜಿತುವಿನ ಮಡದಿ ತಾರಾಕ್ಷಿಯನ್ನು ಪ್ರಭಾವಿಸಿದ್ದಾಳೆ ಎಂದ ಮೇಲೆ ಅನಲೆಯದು ಅತ್ಯಂತ ಪ್ರಭಾವಿ ವ್ಯಕ್ತಿತ್ವ. 'ನಿನಗೆ ಸಖಿಯಲ್ತೆ ಅನಲೆ!’ ಎನ್ನುವ ಇಂದ್ರಜಿತುವಿನ ಮಾತಿನಲ್ಲಿ, ಅನಲೆಯ ಬಗ್ಗೆ ಅವನಿಗಿರುವ ಪ್ರೀತಿಯನ್ನು ಅಂತೆಯೇ ಅವಳ ಸ್ವಭಾವದ ಬಗ್ಗೆ ಇರುವ ವ್ಯಂಗ್ಯವನ್ನೂ ಕಾಣಬಹುದು.
ಹೀಗೆ, ಮೂಲರಾಮಾಯಣದಲ್ಲಿಯಾಗಲೀ ಅಥವಾ ಶ್ರೀರಾಮಾಯಣದರ್ಶನಂ ಕಾವ್ಯಕ್ಕೆ ಮೊದಲ ಕನ್ನಡ ರಾಮಾಯಣಗಳಲ್ಲಾಗಲೀ ಇಲ್ಲದ ಪಾತ್ರವೊಂದು ಸಹೃದಯನ ಎದುರಿಗೆ ತೆರೆದುಕೊಳ್ಳುತ್ತಾ ಸಾಗುತ್ತದೆ. ನೇರವಾಗಿ ಆಕೆಯನ್ನು ಸಹೃದಯ ಎದುರುಗೊಳ್ಳುವುದಕ್ಕೆ ಮೊದಲೇ ಆಕೆಯ ಗುಣಸ್ವಭಾವಗಳನ್ನು, ಒಲವು ನಿಲುವುಗಳನ್ನು ಸಹೃದಯರಿಗೆ ಮನಗಾಣಿಸಿ, ಆಕೆಯನ್ನು ಸ್ವಾಗತಿಸಲು ಸಹೃದಯಮನೋವೇದಿಕೆಯನ್ನು ಕವಿ ಸಿದ್ಧಪಡಿಸುತ್ತಿದ್ದಾರೆ! ಮುಂದಿನ ಅವಳ ಪ್ರವೇಶ, ತಂದೆ ತಾಯಿಯೊಂದಿಗೆ ಆಗಲಿದೆ.
ಮುಂದೆ ಆಂಜನೇಯ ಪ್ರಹಸ್ತ, ಕುಂಭಕರ್ಣ ಮೊದಲಾದವರ ಮನೆಗಳನ್ನು ಸುತ್ತಿ, ವಿಭೀಷಣನಿದ್ದಲ್ಲಿಗೆ ನಾದರೂಪಿಯಾಗಿ (ವಿಪಂಚೀಕ್ವಣನ ಸಂಗಿ ತಾನಾಗಿ) ಬರುತ್ತಾನೆ. ಬರುವಾಗಲೇ ಆತನ ಮನಸ್ಸು ಪ್ರಫುಲ್ಲವಾಗಿದೆ. ಏನೋ ಶುಭವನ್ನು ದರ್ಶಿಸುವ ಆಸೆಯಿಂದಲೇ ಶುಭರೂಪವನ್ನು ಧರಿಸಿಬಿಟ್ಟಿದ್ದಾನೆ ಆಂಜನೇಯ (ಮೇಘನಾದನ ಮನೆಯ ಬಳಿ ಧೂಮರೂಪಿಯಾಗಿದ್ದ!). ಅಲ್ಲಿ ಆತನು ಕಂಡ ಸುಂದರ ದೃಶ್ಯದಲ್ಲಿ ವಿಭೀಷಣನಿದ್ದಾನೆ; ಆತನ ಹೆಂಡತಿ ಸರಮೆಯಿದ್ದಾಳೆ; ಮಗಳು ಅನಲೆಯಿದ್ದಾಳೆ. ಅವಳ ಕಲೆಯಿದೆ. ಆ ದೃಶ್ಯ ಹೀಗಿದೆ:
ಚೆಲುವೆ ಅನಲಾ ಕನ್ಯೆ, ಮಗಳ್ ಆ ವಿಭೀಷಣಗೆ,
ರತ್ನ ಕಂಬಳ ಚಿತ್ರ ವೇದಿಕೆಯ ಮೇಲಿರ್ದು
ಮೀಂಟಿದಳ್ ತಂತಿಯಿಂಚರವೊನಲ್ ಬೀಣೆಯಂ,
ಮಂದಿರದ ಮರದ ಮಣ್ಣಿನ ಜಡಪದಾರ್ಥಗಳ್ ಪ್ರತಿರಣಿಸುವೋಲ್.
ನಾದರೂಪಿ ಮರುತಾತ್ಮಜಂ ಮೋದಮೂರ್ಛೆಗೆ ಸಂದನ್
ಅವ್ಯಕ್ತ ಶೋಕಮಯ ಸ್ವರಸುಖವನೀಂಟಿ.
ಬಳಿಯೊಳೆ ವಿಭೀಷಣನ ಸತಿ ಸರಮೆ ಕುಳ್ತಿರಲ್
ಅನತಿದೂರದೊಳವಂ ತನ್ನ ಮಗಳ ಕಲೆಯಂ ಮೆಚ್ಚಿ, ಕಣ್ ಮುಚ್ಚಿ,
ಕಿವಿದೆರೆದು ಸವಿಯುತಿರ್ದನು ನಿಶ್ಚಲಂ.
ಆ ದೃಶ್ಯವನ್ನು ನೋಡಿದ ಆಂಜನೇಯನಿಗೆ 'ಲಂಕೆಗತಿಥಿಗಳೊ?' ಎಂಬ ಶಂಕೆ ಬಂದುಬಿಡುತ್ತದೆ. ಅವನ ಕಲ್ಪನೆಯ ಲಂಕೆಯಲ್ಲಿ ದುಷ್ಟ ರಾವಣನಿದ್ದಾನೆ. ಅಲ್ಲಿರುವವರೆಲ್ಲರೂ ಅವನಂತೆಯೆ ಎಂದು ಭಾವಿಸಿದ್ದಾನೆ, ಅಷ್ಟರಲ್ಲಿ, ವೀಣೆ ತೆಕ್ಕನೆ ನಿಂತುಬಿಡುತ್ತದೆ. ಆಗ ಬೆಚ್ಚಿದ ಅನಲೆ, 'ಆರ ಬರವನೊ ನಿರೀಕ್ಷಿಸುವ ತೆರದಿ’ ಸುತ್ತ ನೋಡುತ್ತಾಳೆ. ವೀಣೆ ನಿಂತುದುಕ್ಕೆ ವಿಭೀಷಣನೂ ಕಣ್ತೆರೆದು ಪ್ರಶ್ನಾರ್ಥಕವಾಗಿ ಮಗಳನ್ನು ನೋಡುತ್ತಾನೆ. ಆಗ ಅನಲೆ "ಆರೊ ಬಂದಂತಾದುದು" ಎನ್ನುತ್ತಾಳೆ. ಮಗಳನ್ನು ಸಮರ್ಥಿಸುವಂತೆ ಸರಮೆ ಕೂಡಾ "ದಿಟಂ; ಪುಳಕಿಸುತಿದೆ ನನ್ನ ತನು" ಎನ್ನುತ್ತಾಳೆ.
ಒಳ್ಳೆಯ ಸುದ್ದಿ ಬರುವ ಮೊದಲು ನಮಗರಿವಿಲ್ಲದೆ ಮನಸ್ಸು ಸಂತೋಷದಿಂದಿರುತ್ತದೆ. ಹಾಗೆಯೇ ಅಶುಭ ಸುದ್ದಿಯನ್ನು ಕೇಳುವ ಮೊದಲು ಮನಸ್ಸು ಕಳವಳಿಸುತ್ತಿರುತ್ತದೆ. ಇದರ ಮನೋವೈಜ್ಞಾನಿಕ ವಿಶ್ಳೇಷಣೆ ಏನೇ ಇರಲಿ, ಆದರೆ ಜನಸಾಮಾನ್ಯರು ಅಂತಹ ಅನುಭವಗಳನ್ನು ತಮ್ಮ ಮಾತುಗಳ ನಡುವೆ ಪ್ರಸ್ತಾಪಿಸುವುದುಂಟು. ಆಂಜನೇಯ ವಿಭೀಷಣನ ಕುಟುಂಬವನ್ನು ದರ್ಶಿಸುವ ಮೊದಲೇ, 'ಮನದಿ ಸಂತೋಷಿಸಿದನ್, ಅಲ್ಲಿ ಕಲ್ಪಿಸಿ ಶುಭಸ್ನೇಹಮಂ' ಎನ್ನುತ್ತಾರೆ ಕವಿ. ಆಂಜನೇಯನ ಬರವು ಲಂಕೆಗೆ ಶುಭಸೂಚಕವಲ್ಲ; ಅದರೆ ವಿಭೀಷಣನಿಗೆ ಆತನ ಕುಟುಂಬಕ್ಕೆ ಅದೊಂದು ರೀತಿಯಲ್ಲಿ ಶುಭಸೂಚಕವೆ! ಆರಂಭದಲ್ಲಿ ಆದ ಅಲೌಕಿಕ ಅನುಭವಕ್ಕೆ ಅನಲೆ ಬೆಚ್ಚುತ್ತಾಳೆ; ಆದರೆ ಕಳವಳಗೊಳ್ಳುವುದಿಲ್ಲ. ತನ್ನ ಪ್ರೀತಿಪಾತ್ರನಾದ ದೊಡ್ಡಪ್ಪನಿಗಾಗಿ ಹಂಬಲಿಸುವ ಮುಗ್ಧೆಯಾಗಿ ಅವಳಿಗೆ ಆಂಜನೇಯನ ಬರವು ಒಂದು ರೀತಿಯಲ್ಲಿ ಅಶುಭವೂ ಹೌದು. (ಅನಲೆಯ ವೀಣಾಧ್ವನಿ 'ಶೋಕಮಯ ಸ್ವರ’ವಾಗಿದ್ದೇಕೆ? ಎಂಬುದಕ್ಕೆ ಮುಂದೆ ಅವಳ ಮಾತಿನಲ್ಲೇ ಉತ್ತರ ಸಿಗಲಿದೆ) 'ಪುಳಕಿಸುತಿದೆ ನನ್ನ ತನು’ ಎಂಬ ಸರಮೆಯ ಮಾತುಗಳಲ್ಲಿ ಶುಭದ ಸೂಚನೆಯಿದೆ. ಮುಂದೆ ವಿಭೀಷಣನಾಡುವ ಮಾತುಗಳಲ್ಲೂ ಅದು ವ್ಯಕ್ತವಾಗಿದೆ.
ಸೋಜಿಗಮೇಕೆ?
ದಿವ್ಯಕಲೆ ಎಲ್ಲಿರ್ದೊಡಲ್ಲಿಗೆ ಐತಹರಲ್ತೆ ದಲ್
ಪಗಲಿರುಳ್ ವಿಶ್ವಮಂ ಸಂಚರಿಸಿ ರಕ್ಷಿಸುವ
ಸತ್ ಶಕ್ತಿಗಳ್, ದೇವಾತ್ಮಗಳ್?
ನಮ್ಮವೋಲ್ ಅವರುಂ ರಸಪ್ರಿಯರ್.
ನಮಗಿಂ ಮಿಗಿಲ್! ರಸಮೆ ಅವರುಣ್ಬ ಅಮೃತಮಲ್ತೆ?
ಈ ಮಾತುಗಳು ಆಂಜನೇಯನಿಗೆ, ವಿಭೀಷಣನ ಮತ್ತು ಆತನ ಕುಟುಂಬದ ಬಗ್ಗೆ ಗೌರವವನ್ನು ಹೆಚ್ಚಿಸುತ್ತವೆ. ಮುಂದೆ ತಂದೆ, ತಾಯಿ, ಮಗಳ ನಡುವೆ ಸಂಭಾಷಣೆ ನಡೆಯುತ್ತದೆ. ಆಂಜನೇಯನಿಗೆ ಅದು ವಿಭೀಷಣನ ಸಂಸಾರವೆಂದು ತಿಳಿಯುತ್ತದೆ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವ್ಯಕ್ತಿತ್ವ ಸಹೃದಯರ ಮುಂದೆ ಸಕಾರಣವಾಗಿ ಅನಾವರಣಗೊಳ್ಳುತ್ತದೆ. ಆ ಕಾವ್ಯಭಾಗವನ್ನು ಕೆಳಗಿನಂತೆ ನಾಟಕರೂಪದಲ್ಲಿ ಪುನರ್ರೂಪಿಸಬಹುದಾಗಿದೆ.
ಅನಲೆ:
ಮನಂ ಏಕೊ ಬೆಚ್ಚುತಿದೆ!
ಸುಖವೊ ದುಃಖವೊ ತಿಳಿಯೆನ್, ಎದೆಯೆನಳ್ಳಾಡುತಿದೆ!
ವಿಭೀಷಣ:
ನಿನ್ನ ಸಂಗೀತಮುಂ
ಲೋಕ ಶೋಕವನೆಲ್ಲಂ ಆಲಿಪರ ಹೃದಯದೊಳ್ ಕದಡುವೋಲಿರ್ದತ್ತು.
ವತ್ಸೆ, ಹರಯದ ಮಹಿಮೆ ಅಂತುಟೆ ವಲಂ!
ಸರಮೆ:
ಅಶೋಕವನಿಕಾ ಮಧ್ಯೆ
ರಾಮನ ತಪಸ್ವಿನಿಯ ಕಂಡಾ ಮೊದಲ್ಗೊಂಡು,
ಮೇಣಾ ಮಹೀಯಸಿಯ ವಾಗಮೃತಧಾರೆಯಂ ಸವಿದಾ ಮೊದಲ್ಗೊಂಡು,
ಅನ್ಯಳಂತಿಹಳ್ ಎಮ್ಮ ಕನ್ಯೆ!
ಈ ಮಾತು, ಕಿವಿಯ ಮೇಲೆ ಬಿದ್ದಾಕ್ಷಣ ಆಂಜನೇಯನ ಮನದೊಳಗೆ ಆಸೆಯ ಬಿಸಿಲು ಉಜ್ವಲಿಸುತ್ತದೆ. ಏಕೆಂದರೆ, ಹುಡಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಗಿದೆ ಆತನಿಗೆ. ಇತ್ತ ಆ ಮಾತು ಕೇಳಿದ ವಿಭೀಷಣನ ಮನಸ್ಸಿಗೆ ದುಗುಡವಾಗುತ್ತದೆ. ಸಂಕಟದ ಛಾಯೆಯನ್ನು ಆತನ ಕಣ್ಣುಗಳಲ್ಲಿ ಅನಲೆ ಗುರುತಿಸುತ್ತಾಳೆ.
ಅನಲೆ:
ಬೊಪ್ಪಯ್ಯ,
ಮುಚ್ಚುವಿರೆ ನನಗೆ ನಿಮ್ಮಾತ್ಮಮಂ ಸುಡುತ್ತಿರ್ಪ ಅಳಲ ಬೇಗೆಯಂ?
ನನಗಿನ್ ಮಿಗಿಲ್ ದುಃಖಿಗಳ್ ನೀಮ್, ಧರಾತ್ಮಜೆಯ ದೆಸೆಗೆ!
ಮರುಗಿಹಿರಿ ನೀಂ ಪಿರಿಯಯ್ಯಗಾಗಿಯುಂ;
ಮತ್ತೊಮ್ಮೆ ಕುಲಕೆ ಕೀರ್ತಿಗೆ ದೇಶದ ಅವನತಿಗೆ ಧರ್ಮಾಭ್ಯುದಯಕಾಗಿಯುಂ.
ಅರಸನೋಲಗದಿ ನಿಮಗೆ ನಿಮ್ಮಣ್ಣಂಗೆ ಮೇಣ್ ಇತರ ಮುಖ್ಯರಿಗೆ
ನಿಚ್ಚಮುಂ ನಡೆವ ಚರ್ಚೆಯ ತೋಟಿಯೇಂ ನಮಗೆ ತಿಳಿಯದೆಂಬಿರೆ?....
ನಿನ್ನೆ ಸಂಜೆ, ಲಂಕೆಗೆ ಲಂಕೆ ಕಂಡುದಾ ನೋಟಮಂ.
ಬಿಳ್ದುದೊಂದು ಉರಿವ ಅರಿಲ್ ನಗರದ ಉತ್ತರ ಗಿರಿಯ ನೆತ್ತಿಯಲಿ! ...
ದೇವಿಯನ್, ಆ ನನ್ನ ಗುರುದೇವಿಯನ್,
(ಒಯ್ಯನಿಟ್ಟಳ್ ಕಯ್ಯ ವೀಣೆಯನ್, ಗದ್ಗದವನೆಂತಾದೊಡಂ ಸಂಯಮಿಸಿ; ಕಣ್ಬನಿಯನೊರೆಸಿದಳ್ ಸೆರಗುದುದಿಯಿಂ. ಮತ್ತೆ)
ನಿರ್ಭಾಗ್ಯೆಯನ್ ಮರಳಿ ಪತಿಯೆಡೆಗೆ ಕಳುಹದಿರೆ,
ಲಂಕೆಗಿನ್ ಸುಖಂ ಎಲ್ಲಿ? ಲಂಕೆಗಿನ್ ಶುಭಂ ಎಲ್ಲಿ?
ಲಂಕಿಗರ್ ನಮಗೆ ನೆಮ್ಮದಿ ಎಲ್ಲಿ?....
ಬೊಪ್ಪಯ್ಯ ಮಿಡಿಯಲ್ ಒಳ್ಪನೆ ನುಡಿಯುವ ಈ ನನ್ನ ಇನಿಯ ಬೀಣೆ
ಮೀಂಟಲ್ ಈಗಳ್ ಮುನಿದು ಪರಿತಪಿಸುತಿದೆ; ಸುಯ್ದು ಶಪಿಸುತಿದೆ!
ನೀಂ ಇಂದು ಕೇಳ್ದುದು ಎಂಬುದುಂ ಅದರ ಗಾನಮಲ್ತು; ಅನುರೋಧನಂ! .....
ಕೇಳಿಂ ಇನ್ನುಮಾ ಓಂಕಾರದ ಆಲಾಪನೆಯ ತೀಕ್ಷ್ಣಸಂಕಟಂ ತುಂಬಿದೋಲಿದೆ ಮನೆಯ ತುಂಬಿಯಂ!
ಮೂವರೂ ಆ ಆಲಾಪನೆಯನ್ನು ಕೇಳುತ್ತಿರುವಂತೆಯೇ ಅದು ದೂರವಾಗುತ್ತಾ ಸಾಗತ್ತದೆ. ಇತ್ತ ಆಂಜನೇಯನಿಗೆ ಮೈಮನಗಳು ಪುಳಕಗೊಳ್ಳುತ್ತವೆ. "ಇನ್ನನ್ನರಿಂ ಕ್ಷೇಮಿಯೀ ಲಂಕಾ ಕನಕಲಕ್ಷ್ಮಿ!" ಎಂದು ಆತ ಮುಂದೆ ನಡೆಯುತ್ತಾನೆ. ರಾವಣ ಸೀತೆಯನ್ನು ಹೊತ್ತು ತಂದ ಮೇಲೆ, ಆಂಜನೇಯ ಬರುವವರೆಗೂ ಲಂಕೆಯಲ್ಲಿ ಏನೇನು ನಡೆಯಿತು ಎಂಬುದನ್ನು ಕವಿ ಎಲ್ಲಿಯೂ ನೇರವಾಗಿ ನಿರೂಪಿಸಿಲ್ಲ. ಹೀಗೆ ಪಾತ್ರಗಳ ಮುಖಾಂತರವೇ ನಮಗೆ ಅದು ದರ್ಶನವಾಗುತ್ತಾ ಸಾಗುತ್ತದೆ. ಇಲ್ಲಿ ಅನಲೆಯ ಮಾತುಗಳಿಂದ, ರಾವಣನ ಕೃತ್ಯ ಲಂಕೆಯ ಇಲ್ಲರಿಗೂ ಅದು ಇಷ್ಟವಾಗಿಲ್ಲ, ರಾವಣನ ಅಂತರಂಗದವರಿಗೂ ಅದು ಸರಿಯೆನ್ನಿಸಿಲ್ಲ, ಆದರೆ ಬಾಯಿಬಿಟ್ಟು ಆಡುವಂತಿಲ್ಲ; ಅನುಭವಿಸುವಂತಿಲ್ಲ ಅವರ ಸ್ಥಿತಿ ಎಂಬುದರ ಅರಿವಾಗುತ್ತದೆ. ಸರಮೆಯ ಮಾತುಗಳಿಂದ, ಅನಲೆ ಆಗಾಗ ಸೀತೆಯನ್ನು ಅಶೋಕವನದಲ್ಲಿ ಭೇಟಿಯಾಗುತ್ತಿದ್ದಳೆಂಬುದು ತಿಳಿಯುತ್ತದೆ. ಅಷ್ಟಲ್ಲದೆ, ಆಕೆ ಸೀತೆಯ ಮಾತುಗಳಿಂದ ಪ್ರಭಾವಿತಳಾಗಿದ್ದಾಳೆ; ಪ್ರೌಢೆಯಾಗಿದ್ದಾಳೆ ಎಂಬುದೂ ಮನದಟ್ಟಾಗುತ್ತದೆ. ರಾಜಸಭೆಯಲ್ಲಿಯೂ ಸೀತಾಪಹರಣದ ಪರಿಣಾಮ ಚರ್ಚೆಯಾಗಿದೆ. ವಿಭೀಷಣ ತನ್ನ ಕೈಲಾದುದನ್ನು ಮಾಡಿ, ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ರಾವಣನ ಮನವೊಲಿಸಲು ವಿಫಲ ಯತ್ನ ನಡೆಸಿದ್ದಾನೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅನಲೆಯ ವಾಕ್ಚಾತುರ್ಯ. ಆಕೆಯ ತರ್ಕಬದ್ಧ ಅಭಿಪ್ರಾಯ ನಿರೂಪಣೆ, ದೃಢ ನಿಲುವು ಸಹೃದಯರ ಮನ ಸೆಳೆಯುತ್ತವೆ. ಆಕೆಯ ಮಾತುಗಳೇ ಮುಂದೆ ಆಂಜನೇಯನ ಕಾರ್ಯವನ್ನು ಸುಗಮಗೊಳಿಸಿವೆ. ಕಾವ್ಯದ ನೆಡೆಗೆ ಪೂರಕವಾಗಿ ಆಕೆಯ ಪಾತ್ರಕ್ಕೊಂದು ಉಚಿತವಾದ ಸ್ಥಾನವನ್ನು ಕಲ್ಪಿಸುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಿರುವುದನ್ನೂ ಮುಂದೆ ಮನಗಾಣಬಹುದು.

[ನಾಳೆ : ಇವಳೆನ್ನ ಕಾಪಿಡುವ ದೇವಿ!]